ಬಂಧಿಸಲು ಹೋದ ಪೊಲೀಸರ ಮೇಲೆ‌ ಹಲ್ಲೆ ಮಾಡಿದ ರೌಡಿಶೀಟರ್ ಕಾಲಿಗೆ ಗುಂಡೇಟು

ಸುದ್ದಿ ಚಿಕ್ಕಮಗಳೂರು: ವಾರೆಂಟ್ ಜಾರಿ ಮಾಡಿದ್ದರೂ ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ರೌಡಿ ಶೀಟರ್‌ನನ್ನು ಬಂಧಿಸಲು ಹೋದ ಪೊಲೀಸರು  ಚಾಕುವಿನಿಂದ ಹಲ್ಲೆಗೈಯ್ಯಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ  ಸೋಮವಾರ ಬೆಳಿಗ್ಗೆ ನಡೆದಿದೆ.

ಪೂರ್ಣೇಶ್ ಎಂಬ ರೌಡಿ ಶೀಟರ್ ಮೇಲೆ ಹಲವಾರು ಪ್ರಕರಣಗಳಿದ್ದು ಕೋರ್ಟ್ ಗೆ ಹಾಜರಾಗುವಂತೆ ವಾರೆಂಟ್ ಜಾರಿಮಾಡಲಾಗಿತ್ತು. ಆದರೆ ಪೂರ್ಣೇಶ್ ತಲೆಮರೆಸಿಕೊಂಡು ಓಡಾಡುತ್ತಿದ್ದ. ಇಂದು ಬೆಳಗ್ಗೆ 6:15 ಸುಮಾರಿಗೆ ಬಾಳೆಹೊನ್ನೂರು ಠಾಣೆಯ ಪಿಎಸ್ ಐ ದಿಲೀಪ್ ಕುಮಾರ್  ನೇತೃತ್ವದಲ್ಲಿ ಬಂಧಿಸಲು ತೆರಳಿದ್ದು, ಸೆರೆಂಡರ್ ಆಗುವಂತೆ ತಿಳಿಸಿದ್ದಾರೆ. ಆದರೆ ಪೂರ್ಣೇಶ್ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಗಾಳಿಯಲ್ಲಿ ಎರಡು ಸುತ್ತು ಗುಂಡು ಹೊಡೆದರೂ ಮಾತು ಕೇಳದ ಪೂರ್ಣೇಶ್ ಕಾಲಿಗೆ ಪಿಎಸ್ ಐ ದಿಲೀಪ್ ಫೈರಿಂಗ್ ಮಾಡಿದ್ದಾರೆ.

ರೌಡಿಯಿಂದ ಹಲ್ಲೆಗೊಳಗಾದ ಪೇದೆ ಮಂಜುನಾಥ್ ರನ್ನು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪೊಲೀಸರಿಂದ ಗುಂಡೇಟು ತಿಂದ ರೌಡಿ ಶೀಟರ್ ಪೂರ್ಣೇಶ್ ನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಕೊಪ್ಪ ಡಿವೈಎಸ್ಪಿ ಅನಿಲ್ ಮಹದಾಸ್ ಭೇಟಿ ನೀಡಿದ್ದಾರೆ.

ಗಾಯಗೊಂಡ ಪೊಲೀಸ್ ಪೇದೆಯನ್ನು ಜಿಲ್ಲಾ ಪೊಲೀಸ್ ಎಸ್ಪಿ ವಿಕ್ರಮ ಅಮಟೆ ಉಪಚರಿಸಿದರು

Leave a Reply

Your email address will not be published. Required fields are marked *

error: Content is protected !!