ಸುದ್ದಿ ಕಡೂರು: ಭಾರತ ಒಕ್ಕೂಟ ವ್ಯವಸ್ಥೆಯಡಿ ಕರ್ನಾಟಕ ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಪ್ರತಿ ಕನ್ನಡಿಗರು ಪ್ರಶ್ನಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಡೂರಿನಲ್ಲಿ ಬುಧವಾರ ನಡೆದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಸಿಗಬೇಕಾದ ಪಾಲನ್ನು ನೀಡದೆ ಕೇಂದ್ರ ಸರ್ಕಾರದ ನಡೆ ಕರುನಾಡಿಗೆ ಮಾಡುತ್ತಿರುವ ಅವಮಾನವೆಂದೇ ತಿಳಿಯಬೇಕಿದೆ. ಸಾವಿರಾರು ಜನರ ತ್ಯಾಗದ ಫಲವಾಗಿ ರೂಪುಗೊಂಡ ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರತೀ ಕನ್ನಡಿಗರೂ ಒಟ್ಟಾಗಿ ಹೋರಾಡಬೇಕಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ನಾಡಪ್ರೇಮ ಮತ್ತು ದೇಶಪ್ರೇಮ, ಇತಿಹಾಸ ದ ಬಗ್ಗೆ ಆಸಕ್ತಿ ಮೂಡಿಸಬೇಕು.ಕನ್ನಡಿಗರು ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ರಾಷ್ಟ್ರಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಎರಡು ಸಾವಿರ ವರ್ಷದ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ನಾಮಕರಣ ಮಾಡಿದ ಈ ದಿನ ಕನ್ನಡಿಗರ ಹೆಮ್ಮೆಯ ದಿನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಟಿ.ಎನ್.ಎ.ಮೊದಲಿಯಾರ್ ಸೇರಿದಂತೆ ಐದು ಸಾಧಕರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಪಿಎಸೈ ಧನಂಜಯ, ಪುರಸಭಾ ಸದಸ್ಯರಾದ ಕೆ.ಎಂ.ಮೋಹನ್ ಕುಮಾರ್, ಮರುಗುದ್ದಿ ಮನು, ಈರಳ್ಳಿ ರಮೇಶ್, ಯಾಸೀನ್, ಜ್ಯೋತಿ ಆನಂದ್, ಹಾಲಮ್ಮ,
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಇದ್ದರು.