ಸುದ್ದಿ ಚಿಕ್ಕಮಗಳೂರು : ನನಗಿರುವುದು ಒಂದೇ ಪಾರ್ಟಿ ಅದು ಬಿಜೆಪಿ, ನನಗೆ ರಾಜಕೀಯ ಬೇಡ ಎಂದರೆ ರಾಜಕೀಯ ಬಿಟ್ಟು ಕೂರುತ್ತೇನೆಯೇ ಹೊರತು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ ರಾಜಕಾರಣ ಮಾಡುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಅಧ್ಯಕ್ಷ ಸ್ಥಾನ ಎನ್ನುವುದು ಒಂದು ಸ್ಥಾನ ಆ ಪೀಠಕ್ಕೆ ಯಾವ ಬೆಲೆ ಕೊಡಬೇಕೋ ಆ ಬೆಲೆಯನ್ನು ನಾನು ಕೊಡುತ್ತೇನೆ. ನ್ಯಾಯಪೀಠ ಎಂದಿಗೂ ಬದಲಾಗುವುದಿಲ್ಲ ಕೇವಲ ನ್ಯಾಯಾಧೀಶರು ಮಾತ್ರ ಬದಲಾಗುತ್ತಾರೆ ನಾವುಗಳು ಆ ಪೀಠಕ್ಕೆ ಬೆಲೆ ಕೊಡುತ್ತೇವೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ನಮ್ಮ ಮುಂದಿನ ಗುರಿಯಾಗಿದೆ. ದೇಶದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು, ಆ ಗುರಿಯನ್ನು ಈಡೇರಿಸಲು ಎಲ್ಲ ರೀತಿಯ ಕೆಲಸವನ್ನು ಮಾಡಿ, ಸಹಕಾರವನ್ನು ನೀಡುತ್ತೇವೆ. ನಾವು ಇದುವರೆಗೂ ಕೂಡ ಎಂದು ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ, 20 ವರ್ಷಗಳ ಕಾಲ ಶಾಸಕರಾಗಿ, 30 ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಅನ್ಯ ಅನ್ಯ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ನಾನು ಎಂದೂ ಕೂಡ ಪಕ್ಷದ ಲಕ್ಷ್ಮಣ ರೇಖೆಯನ್ನು ದಾಟಿಲ್ಲ. ಒಂದು ವೇಳೆ ಜಗಳ ಮಾಡಿದರೂ ಕೂಡ ನಮ್ಮ ಮನೆಯ ಒಳಗೇ ಜಗಳ ಆಡುತ್ತೇವೆ, ಪಕ್ಕದ ಮನೆಯಲ್ಲಿ ಕೂತು ನಮ್ಮ ಮನೆಯ ಸಮಸ್ಯೆಯನ್ನ ಬಗೆಹರಿಸಿ ಎಂದು ಕೇಳುವುದಿಲ್ಲ, ನಮ್ಮ ಮನೆಯಲ್ಲಿ ಜಗಳವಾಡುತ್ತೇವೆ ಎಂದು ಸಮರ್ಥಿಸಿಕೊಂಡರು. ಒಂದು ವೇಳೆ ಪಕ್ಷ ನಮಗೆ ಯಾವುದೇ ರೀತಿಯ ಜವಾಬ್ದಾರಿಯನ್ನು ನೀಡಲಿಲ್ಲ ಎಂದರೂ ಕೂಡ ಬಿಜೆಪಿಗೆ ಮತ ಕೊಡಿ ಎಂದು ನನ್ನ ಶಕ್ತಿ ಮೀರಿ ಕೇಳುತ್ತೇನೆ, ಅದನ್ನು ಬಿಟ್ಟು ಬೇರೆ ಪಕ್ಷಕ್ಕೆ ವೋಟ್ ಕೇಳುವುದಿಲ್ಲ, ಕೇಳುವುದಕ್ಕೆ ಆಗುವುದಿಲ್ಲ. ನನಗೆ ಅಧಿಕಾರ ಕೊಟ್ಟರೆ ಮಾತ್ರ ಬಿಜೆಪಿ, ಕೊಡಲಿಲ್ಲ ಎಂದರೆ ಬಿಜೆಪಿಯಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ನನಗೆ ಬುದ್ದಿ ಬಂದಾಗಿನಿಂದಲೂ, ಯಾವಾಗ ಬಿಜೆಪಿಗೆ ಸೇರಿದೆನೋ, ಆ ಕಾಲದಿಂದಲೂ ಕೂಡ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಮತ ಕೇಳಿಲ್ಲ, ಮತ ಹಾಕಿಲ್ಲ ಎಂದು ಹೇಳಿದರು.