ರಾಜಯೋಗ ಚಿತ್ರಕ್ಕೆ ಹಾರೈಸಿದ ಶಾಸಕ ಕೆ.ಎಸ್.‌ ಆನಂದ್

ಸುದ್ದಿಕಡೂರು : ಕೌಟುಂಬಿಕ ಜೀವನದ ವಾಸ್ತವ ಚಿತ್ರಣವನ್ನು ತೆರೆಯ ಮೇಲೆ ಅದ್ಬುತವಾದ ಅಭಿನಯ ಪಾತ್ರದೊಂದಿಗೆ ಎಲ್ಲರ ಮನಗೆದ್ದಿರುವ ಕಡೂರಿನ ಹೆಮ್ಮೆಯ ನಟ ಧರ್ಮಣ್ಣನಿಗೆ ರಾಜಯೋಗ ಚಿತ್ರದಿಂದ ಮತ್ತಷ್ಟು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಯೋಗ ಕೂಡಿ ಬರುವಂತಾಗಲಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ವಿಜಯಲಕ್ಷ್ಮೀ ಚಿತ್ರಮಂದಿರದಲ್ಲಿ ಶುಕ್ರವಾರ ತೆರೆಕಂಡ ರಾಜಯೋಗ ಚಿತ್ರ ಪ್ರದರ್ಶನಕ್ಕು ಮುನ್ನ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಶ್ರಮಿಕಜೀವಿಯಾಗಿ ಬೆಳೆದು ಎಲ್ಲರ ಮೆಚ್ಚಿನ ಸ್ನೇಹಜೀವಿಯಾದ ಧರ್ಮಣ್ಣ ತಮ್ಮ ಉತ್ತಮ ಕಲಾಪ್ರತಿಭೆಯೊಂದಿಗೆ ರಾಜ್ಯಾದ್ಯಂತ ಗುರುತಿಸಿಕೊಂಡಿರುವುದು ತಾಲ್ಲೂಕಿಗೆ ಚಿತ್ರೋದ್ಯಮ ಕ್ಷೇತ್ರದಲ್ಲಿ ಹಿರಿಮೆ ಮೂಡಿಸಿದೆ. ಹಲವು ನಾಟಕಗಳು, ರಂಗಭೂಮಿ ಕಲಾವಿದನಾಗಿ ಹೊರಹೊಮ್ಮಿ ಪ್ರಸಿದ್ದ ನಾಯಕನಟರೊಂದಿಗೆ ವಿಭಿನ್ನ ಪಾತ್ರಗಳಿಂದ ಚಿತ್ರದೋದ್ಯಮ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆಯುತ್ತಿದ್ದು, ಇದೀಗ ಉತ್ತಮ ಚಿತ್ರತಂಡದೊಂದಿಗೆ ಪರಿಪೂರ್ಣ ನಾಯಕನಟನಾಗಿ ರಾಜಯೋಗ ಚಿತ್ರದೊಂದಿಗೆ ಹೊರಹೊಮ್ಮಿರುವುದು ಸಂತಸಮೂಡಿಸಿದೆ ಎಂದರು.

ಪುರಸಭಾ ಸದಸ್ಯ ತೋಟದಮನೆ ಮೋಹನ್‌ಕುಮಾರ್ ಮಾತನಾಡಿ, ಉತ್ತಮ ಕಥೆಯಾಧಾರಿತವಾಗಿರುವ ರಾಜಯೋಗ ಚಿತ್ರವು ಉತ್ತಮ ಪ್ರದರ್ಶನ ಕಾಣುವಂತಾಗಲಿ. ಕಡೂರಿನ ಮನೆ ಮಗ ಧರ್ಮಣ್ಣ ನಾಯಕನಟನಾಗಿ ಅಭಿನಯಿಸಿರುವ ಚಿತ್ರವು ಸೇರಿದಂತೆ ಮತ್ತಷ್ಟು ಚಿತ್ರಗಳು ಲಭಿಸಲಿ ಎಂದರು. ಈ  ಸಂದರ್ಭದಲ್ಲಿ ಮತ್ತೋರ್ವ ಪುರಸಭಾ ಸದಸ್ಯ ಮರುಗುದ್ದಿ ಮನು, ಪ್ರಕಾಶ್, ರಾಜು, ಹೊನ್ನಪ್ಪ, ಸಪ್ತಕೋಟಿ ಧನಂಜಯ್, ವೆಂಕಟೇಶ್, ಸುರೇಶ್, ಚೇತನ್, ಅರುಣ, ಗೋಪಿ ಹಾಗೂ ದರ್ಶನ್, ಸುದೀಪ್ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು.

 

Leave a Reply

Your email address will not be published. Required fields are marked *

error: Content is protected !!