ಸುದ್ದಿಕಡೂರು : ಪೋಲೀಸರೆಂದರೆ ಕೇವಲ ದಂಡಿಸಲಿಕ್ಕೇ ಇರುವವರೆಂಬ ತಪ್ಪು ಭಾವನೆಯ ಮಧ್ಯೆ ಕಡೂರಿನ ಇಬ್ಬರು ಪೊಲೀಸ್ ಸಿಬ್ಬಂದಿಗಳು ಪ್ರಕರಣದ ಮಹಜರು ಮಾಡಲು ಹೋದಾಗ ಕಾಲಿನ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿರುವ ವ್ಯಕ್ತಿಯ ಕುಟುಂಬಕ್ಕೆ ಔಷಧಿಗಳು ಹಾಗೂ ಒಂದು ತಿಂಗಳಿಗೆ ಆಗುವಷ್ಟು ಅಡುಗೆ ಸಾಮಾಗ್ರಿಗಳು ನೀಡಿ ತಮ್ಮ ಮಾನವೀಯತೆ ಮೆರೆದಿರುವ ಪ್ರಸಂಗ ಬೀರೂರಿನಲ್ಲಿ ನಡೆದಿದೆ.
ಏನಿದು ಘಟನೆ : ಕಳೆದ 4 ತಿಂಗಳ ಹಿಂದೆ ಕಡೂರು ಪಟ್ಟಣದ ವೇದಾವತಿ ಬಾಲಿಕಾ ಪ್ರೌಢಶಾಲೆಯಲ್ಲಿ ಬೀರೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯ ನಿವಾಸಿ ಸದಾಶಿವ ಎಂಬುವವರು ಗಾರೆಕೆಲಸ ಮಾಡುತ್ತಿರುವಾಗ ಮೊದಲನೆ ಮಹಡಿಯಿಂದ ಕೆಳಗೆ ಬಿದ್ದಪರಿಣಾಮ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ತನ್ನ ಕಾಲಿನ ಸ್ವಾದೀನ ಕಳೆದುಕೊಂಡು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಬೀರೂರಿನ ಮನೆಯಲ್ಲಿಯೇ ತನ್ನ ಪತ್ನಿಯ ಹಾರೈಕೆಯಲ್ಲಿದ್ದಾರೆ.
ಘಟನೆಯ ಬಳಿಕ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಂಟದ ಸ್ವಾಧೀನ ಕಳೆದುಕೊಂಡು ಮನೆಯಲ್ಲಿಯೇ ಹಾಸಿಗೆ ಹಿಡಿದಿದ್ದ ಸದಾಶಿವನಿಗೆ ತನ್ನ ಪುಟ್ಟ ಮಗುವಿನ ಕುಟುಂಬದ ಸಂಸಾರವನ್ನು ನಡೆಸಲಾಗದೆ ಇರುವ ಪರಿಸ್ಥಿತಿ ಕಂಡು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ಮಾಡಿಕೊಳ್ಳಬೇಕೆಂಬ ನಿರ್ಧಾರಿಸಿದ್ದನು ಎನ್ನಲಾಗಿತ್ತು. ಪ್ರಕರಣದ ಮಹಜರು ಮಾಡುವ ನೆಪದಲ್ಲಿ ಕಡೂರು ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ಗಳಾದ ಮಂಜುನಾಥಸ್ವಾಮಿ ಮತ್ತು ಕುಚೇಲ ಇಬ್ಬರು ಸಿಬ್ಬಂದಿಗಳು ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬದ ಪರಿಸ್ಥಿತಿ ಮತ್ತು ಆತನ ಮಾನಸಿಕ ಖಿನ್ನತೆಗೆ ಒಳಗಾಗಿದ್ದರ ಬಗ್ಗೆ ಮರುಗಿ ಒಂದು ತಿಂಗಳಾಗುವಷ್ಟು ಅಡುಗೆ ಸಾಮಾಗ್ರಿಗಳು ಹಾಗೂ ಆತನ ದಿನನಿತ್ಯಕ್ಕೆ ಬೇಕಾಗುವ ಔಷಧಿಗಳನ್ನು ಒದಗಿಸಿಕೊಟ್ಟು ಆತನ ಚೇತರಿಕೆಗೆ ಮಾನಸಿಕ ಸ್ಥೈರ್ಯ ತುಂಬಿದ್ದಾರೆ. ಆತನ ಬಡತನದಲ್ಲಿನ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲು ಸಂಘ ಸಂಸ್ಥೆಗಳ ನೆರವು ಅವಶ್ಯಕವಾಗಿದೆ.