ಸುದ್ದಿ ಕಡೂರು : ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಮಂಡಳಿಯಲ್ಲಿ ನೊಂದಣಿ ಮಾಡಿಸದೆ ಕಾರ್ಯನಿರ್ವಹಿಸುತ್ತಿದ್ದ ಪಟ್ಟಣದ ಕೆಲ ಖಾಸಗಿ ಕ್ಲಿನಿಕ್ ಗಳು ಹಾಗೂ ಲ್ಯಾಬೋರೇಟರಿಗಳಿಗೆ ಸೋಮವಾರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ
ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, ಕ್ಲಿನಿಕ್ ಗಳನ್ನು ಮುಚ್ಚುವಂತೆ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಮಂಡಳಿಯಲ್ಲಿ(ಕೆಪಿಎಂಇ) ನೊಂದಣಿ ಮಾಡಿಕೊಳ್ಳದ ಖಾಸಗಿ ಕ್ಲಿನಿಕ್ ಗಳಾದ ಸಿಗಂದೂರು ಕ್ಲಿನಿಕ್, ವಸಡು ರೋಗ ಕ್ಲಿನಿಕ್ ಮತ್ತು 4 ಲ್ಯಾಬೋರೇಟಿರಿಗಳಾದ ಎಚ್.ಕೆ.ಬಿ.ಎನ್ ಲ್ಯಾಬೋರೇಟರಿ, ಮಾರುತಿ ಡಯಾಗ್ನಾಸ್ಟಿಕ್ ಲ್ಯಾಬ್, ವೆಂಕಟೇಶ್ವರ ಲ್ಯಾಬ್, ಕಾಮಧೇನು ಲ್ಯಾಬೋರೇಟರಿಗಳಿಗೆ ಭೇಟಿ ನೀಡಿದ ಆರೋಗ್ಯ ಅಧಿಕಾರಿಗಳ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಖಾಸಗಿ ಕ್ಲಿನಿಕ್ ಮತ್ತು ಲ್ಯಾಬೋರೇಟರಿಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿ ನಿರ್ಲಕ್ಷ್ಯವಹಿಸಿರುವ ಬಗ್ಗೆ ಗರಂ ಆದ ಆರೋಗ್ಯ ಅಧಿಕಾರಿಗಳು ಲ್ಯಾಬೋರೇಟರಿಗಳ ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಅಶ್ವಥ್ ಬಾಬು ಮಾತನಾಡಿ, ನಿಯಮಗಳನ್ನು ಪಾಲಿಸದೆ ಇರುವ ಖಾಸಗಿ ಕ್ಲಿನಿಕ್ ಮತ್ತು ಲ್ಯಾಬೋರೇಟರಿ ಗಳಿಗೆ ಇಲಾಖೆಯ ವತಿಯಿಂದ ನೋಟಿಸ್ ಗಳನ್ನು ನೀಡಲಾಗಿದೆ. ತೀವ್ರ ನಿರ್ಲಕ್ಷ್ಯವಹಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಲಾಗಿದೆ. ಕೂಡಲೇ ಮಾಲೀಕರು ಕೆಪಿಎಂಇ ನಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕಿದೆ. ನೊಂದಾವಣಿ ಮಾಡಿಸಿಕೊಂಡ ಬಳಿಕವೇ ಕ್ಲಿನಿಕ್ ಮತ್ತು ಲ್ಯಾಬೋರೇಟರಿಗಳನ್ನು ತೆರೆಯಬೇಕಿದ್ದು ಅಲ್ಲಿಯವರೆಗೆ ಅಂಗಡಿಗಳನ್ನು ಬಂದ್ ಮಾಡುವಂತೆ ನಿರ್ದೇಶಿಸಲಾಗಿದೆ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಲಾ ಮಾತನಾಡಿ ಕೆಪಿಎಂಎ ನಲ್ಲಿ ನೊಂದಾಯಿಸಿಕೊಳ್ಳದ ಕ್ಲಿನಿಕ್ ಹಾಗೂ ಲ್ಯಾಬೋರೇಟರಿಗಳನ್ನು ಮುಚ್ಚಿಸಲಾಗಿದೆ.ನೊಂದಣಿ ಮಾಡಿಕೊಳ್ಳದೆ ಮತ್ತೆ ಪುನರಾರಂಭಿಸಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಗ್ರಾಮೀಣ ಭಾಗದಲ್ಲಿಯೂ ಕಾರ್ಯಾಚರಣೆ ಮುಂದುವರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಸಿ.ಎಸ್. ರವಿಕುಮಾರ್, ಸಹಾಯಕ ಆರೋಗ್ಯಾಧಿಕಾರಿ ಮಮತ ಮತ್ತಿತರಿದ್ದರು.