ಪೋಲೀಸ್ ವ್ಯವಸ್ಥೆ ಸರ್ಕಾರದ ಮುಖ ಇದ್ದಂತೆ – ಗೃಹ ಸಚಿವ ಜಿ.ಪರಮೇಶ್ವರ್

ಸುದ್ದಿ ಚಿಕ್ಕಮಗಳೂರು:  ಪೋಲೀಸ್ ವ್ಯವಸ್ಥೆ ಸರ್ಕಾರದ ಮುಖ ಇದ್ದಂತೆ. ಪೋಲೀಸ್ ವ್ಯವಸ್ಥೆ ಸರಿಯಾಗಿದ್ದರೆ ಕಾನೂನು ಸುವ್ಯವಸ್ಥೆ ಪಾಲನೆ ಶಾಂತಿ, ನೆಮ್ಮದಿ ಇದ್ದು, ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಅರ್ಥ. ಈ ಕಾರಣದಿಂದ ರಾಜ್ಯ ಪೋಲೀಸ್ ಇಲಾಖೆಯನ್ನು ಮತ್ತಷ್ಟು ಆಧುನೀಕರಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಚಿಕ್ಕಮಗಳೂರು ನಗರದ ಬಾರ್‌ಲೈನ್ ರಸ್ತೆಯಲ್ಲಿ ನಿರ್ಮಾಣವಾಗಿರುವ 36 ಪೋಲೀಸ್ ವಸತಿಗೃಹಗಳ ವಸತಿ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಹಾಗೂ ರಾಜ್ಯದ ಹಿರಿಯ ರಾಜಕೀಯ ಮುತ್ಸುದ್ಧಿ ದಿ. ಡಿ.ಬಿ ಚಂದ್ರೇಗೌಡರನ್ನು ಸ್ಮರಿಸಿದ ಅವರು ಪೋಲೀಸ್ ಸಿಬ್ಬಂದಿಯವರು ಬೇರೆಯವರಲ್ಲಿ ಅವರೂ ಕೂಡ ನಮ್ಮವರೇ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಬೇಕು. ಈ ಹಿನ್ನಲೆಯಲ್ಲಿ ಪೋಲೀಸ್ ಸಿಬ್ಬಂದಿಗಳಿಗೆ ಉತ್ತಮವಾದ ವಸತಿ ಸೌಕರ್ಯ ಒದಗಿಸಲು ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ತಾವು ಈ ಹಿಂದೆ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯ ಎಲ್ಲಾ ಪೊಲೀಸ್ ಠಾಣೆಗಳನ್ನು ಆಧುನೀಕರಣಗೊಳಿಸಲಾಗಿತ್ತು, ಆ ಸಂದರ್ಭದಲ್ಲಿ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಪೋಲೀಸ್ ಸಿಬ್ಬಂದಿಯವರ ವಸತಿ ವ್ಯವಸ್ಥೆಯನ್ನು ಗಮನಿಸಿದಾಗ ಅತ್ಯಂತ ಹಳೆಯ ಮತ್ತು ವಾಸಮಾಡಲಾಗದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ತಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪೋಲೀಸರು ಅತ್ಯಂತ ಸಮರ್ಥವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ವಸತಿ, ಶಿಕ್ಷಣ ಮತ್ತು ಆರೋಗ್ಯ ವೃದ್ಧಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು ಎಂದು ಹೇಳಿದರು.

ಪೋಲೀಸ್ ಸಿಬ್ಬಂದಿಯವರಿಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸುವ ಸಲುವಾಗಿ ಸುಮಾರು 2 ಸಾವಿರ ಕೋಟಿ ರೂ ವೆಚ್ಚದಲ್ಲಿ ವಸತಿಗಳನ್ನು ನಿರ್ಮಿಸಿಕೊಡಬೇಕೆಂಬ 2000-20 ಯೋಜನೆಯನ್ನು ರೂಪಿಸಿಕೊಂಡು ಅತ್ಯಾಧುನಿಕ ಸೌಲಭ್ಯಗಳುಳ್ಳ ವಸತಿ ಸಮುಚ್ಚಯ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಪೋಲೀಸ್ ಸಿಬ್ಬಂದಿಯವರು ನೆಮ್ಮದಿಯಿಂದ ಸಮರ್ಥರಾಗಿ ಕೆಲಸ ಮಾಡಬೇಕಾದರೆ ಅವರ ಕುಟುಂಬದವರ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಗಮನಿಸುವುದು ಸರ್ಕಾರದ ಜವಾಬ್ದಾರಿ ಆಗಿರುವುದರಿಂದ ಸುಮಾರು 100 ಕೋಟಿ ರೂ ವೆಚ್ಚದಲ್ಲಿ 67 ಪೋಲೀಸ್ ಪಬ್ಲಿಕ್ ಶಾಲೆಗಳು ಮತ್ತು ಪೊಲೀಸ್ ಕುಟುಂಬದವರ ಆರೋಗ್ಯ ರಕ್ಷಣೆಗೆ ವೆಚ್ಚ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗಳಿಗೆ ವಸತಿ ನಿರ್ಮಿಸಲು ಉದ್ದೇಶಿಸಿದ್ದು, ಎಲ್ಲಾ ಸಿಬ್ಬಂದಿಗಳಿಗೂ ವಸತಿ ನಿರ್ಮಿಸಿಕೊಡುವವರೆಗೆ ಈ ಯೋಜನೆಯನ್ನು ಮುಂದುವರೆಸುವ ಸಲುವಾಗಿ 2020 ರ ಯೋಜನೆಯನ್ನು 25 ಎಂದು ಬದಲಾಯಿಸಿದ್ದು ಈ ಯೋಜನೆಗೆ 2 ಸಾವಿರ ಕೋಟಿ ರೂ ಹೆಚ್ಚುವರಿಯಾಗಿ ಅನುದಾನ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಗೃಹ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಪೊಲೀಸರ ನೇಮಕಾತಿಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಅಧುನಿಕ ಕಾಲದಲ್ಲಿ ಈಗಿನ ತಾಂತ್ರಿಕತೆಗೆ ತಕ್ಕಂತೆ ಅವರ ಕೌಶಲ್ಯ ಹೊಂದಿರುವ ಪದವೀಧರರನ್ನು ನೇಮಕ ಮಾಡಿಕೊಂಡು ಪೊಲೀಸ್ ಇಲಾಖೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಇದನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯದಲ್ಲಿ 47 ಸೈಬರ್ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ ಎಂದ ಅವರು. ಆದರೂ ಸೈಬರ್ ಅಪರಾಧಗಳ ಸಂಖ್ಯೆಯು ಹೆಚ್ಚಾಗುತ್ತಿದೆ ಇವುಗಳನ್ನು ನಿಭಾಯಿಸುವಲ್ಲಿ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿ ಇದ್ದು ಮಾದರಿಯಾಗಿದೆ.

ಜನಪರವಾದ ಆಡಳಿತ ತರಬೇಕೆಂಬ ಉದ್ದೇಶದಿಂದ ತಮ್ಮ ನೇತೃತ್ವದಲ್ಲಿ ಪ್ರಣಾಳಿಕೆ ಸಿದ್ಧಪಡಿಸಿ ಅದರಂತೆ ಸರ್ಕಾರ ಜನಪರವಾದ ಆಡಳಿತ ನಡೆಸುತ್ತಿದೆ. ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರು ಮತ್ತು ಸಾಮಾನ್ಯ ಜನರ ಆರ್ಥಿಕ ಮಟ್ಟ ಸುಧಾರಣೆಯಾಗಿದೆ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಒಂದು ಕುಟುಂಬಕ್ಕೆ ಎಲ್ಲ ಯೋಜನೆಗಳಿಂದ ವರ್ಷಕ್ಕೆ ಸರಾಸರಿ 52 ಸಾವಿರ ರೂ ದೊರೆಯುತ್ತದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಹಣ ಹೊಂದಾಣಿಕೆ ಮಾಡುವ ವಿಷಯದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿದರೆ. ಯಾವುದೇ ರೀತಿಯಿಂದಲೂ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸುವುದಿಲ್ಲ ಎಂದ ಅವರು ಪೊಲೀಸ್ ಇಲಾಖೆಯು ಸೇರಿದಂತೆ ತಾಲೂಕು ಕಚೇರಿಗಳಲ್ಲಿ ತಮ್ಮ ಸಮಸ್ಯೆಗಳನ್ನು ತರುವ ಜನರಿಗೆ ಒಳ್ಳೆ ರೀತಿಯಿಂದ ಸ್ಪಂದಿಸಿ ಜನಸ್ನೇಹಿ ಆಡಳಿತ ನಡೆಸುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕವಾಗಿ ಮಾತನಾಡಿದ ಡಿಜಿಪಿ ಹಾಗೂ ಪೋಲೀಸ್ ವಸತಿ ನಿಗಮದ ಅಧ್ಯಕ್ಷ ಡಾ. ಕೆ. ರಾಮಚಂದ್ರರಾವ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಚ್.ಡಿ ತಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಶಾಸಕರಾದ ಟಿ.ಡಿ ರಾಜೇಗೌಡ, ನಯನಮೋಟಮ್ಮ, ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ, ಪಶ್ಚಿಮ ವಲಯ ಉಪ ಮಹಾನಿರೀಕ್ಷಕ ಡಾ. ಚಂದ್ರಗುಪ್ತ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಮಂಜುನಾಥ್, ಚನ್ನಬಸಪ್ಪ, ಶೀಲಾದಿನೇಶ್, ಗಾಯತ್ರಿ ಶಾಂತೇಗೌಡ, ಬಿ.ಬಿ ನಿಂಗಯ್ಯ, ಎಎಸ್ಪಿ ಕೃಷ್ಣಮೂರ್ತಿ ಇದ್ದರು.

Leave a Reply

Your email address will not be published. Required fields are marked *

error: Content is protected !!