ಸುದ್ದಿ ಕಡೂರು: ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ವಾಹನಗಳನ್ನು ವಾಪಸ್ಸು ಕಳಿಸಿದ ಕಂದಾಯ ಅಧಿಕಾರಿಗಳು ಮಣ್ಣು ಸಾಕಾಣಿಕೆಯನ್ನು ತಡೆದಿದ್ದಾರೆ.
ಸಖರಾಯಪಟ್ಟಣ ಹೋಬಳಿಯ
ಎಸ್.ಬಿದರೆ ಗ್ರಾಮದ ಸರ್ವೆ ನಂ 138ರಲ್ಲಿರುವ ಸರ್ಕಾರಿ ಗೋಮಾಳದ ಜಮೀನಿನಲ್ಲಿ ಶನಿವಾರ ಏಕಾಏಕಿ 10 ಕ್ಕೂ ಹೆಚ್ಚು ಲಾರಿಗಳು, ಹಿಟಾಚಿ ಯಂತ್ರಗಳೊಡನೆ ಬಂದವರು ಮಣ್ಣು ಬಗೆಯಲಾರಂಭಿಸಿದ್ದಾರೆ. ಯಮಗಾತ್ರದ ಕಲ್ಲುಗಳನ್ನು ಲಾರಿಯ ಮೇಲೆ ಸಾಗಿಸಲಾರಂಭಿಸಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಪ್ರಶ್ನಿಸಿದರೂ ಸಮಂಜಸ ಉತ್ತರ ದೊರೆಯದೆ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ತಹಶೀಲ್ದಾರ್ ಎಂ.ಪಿ.ಕವಿರಾಜ್ ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.
ಕಂದಾಯಾಧಿಕಾರಿ ಜಿತೇಂದ್ರ ಸ್ಥಳಕ್ಕೆ ಬಂದಾಗ ಮಣ್ಣು ಬಗೆಯುತ್ತಿದ್ದವರು ಲಾರಿ ಮತ್ತಿತರ ವಾಹನಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕಂದಾಯಾಧಿಕಾರಿಗಳು ಅಲ್ಲಿ ನಿಂತಿದ್ದ ಹಿಟಾಚಿ ಯಂತ್ರದ ನೊಂದಣಿ ಸಂಖ್ಯೆಯಲ್ಲದ್ದನ್ನು ಗಮನಿಸಿ ಮುಂದಿನಕ್ರಮ ಕೈಗೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ನಿರ್ದೇಶಕರಿಗೆ ಅವರಿಗೆ ವರದಿ ನೀಡಿದ್ದಾರೆ.
ಮಂಗಳವಾರ ಹಿರಿಯ ಭೂ ವಿಜ್ಞಾನಿ ವಿಂಧ್ಯಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಪ್ರಯತ್ನಿಸಿದ್ದಾರೆ. ಭೂಗರ್ಭದಲ್ಲಿರಬಹುದಾದ ಕಲ್ಲುಗಳನ್ನು ಮೇಲೆತ್ತಿ ಒಂದೆಡೆ ರಾಶಿ ಹಾಕಿದ್ದಾರೆ. ಆದರೆ ಅಲ್ಲಿ ಯಾವದೇ ಯಂತ್ರ ದೊರೆತಿಲ್ಲ. ಹೆಚ್ಚಿನ ಕಲ್ಲುಗಳನ್ನು ಸಾಗಿಸಿರುವುದು ಕಂಡುಬಂದಿಲ್ಲ. ಕೃತ್ಯ ನಡೆಸಿದವರ ಬಗ್ಗೆ ಸಾಕ್ಷಿ ಹೇಳಲು ಯಾರೂ ಮುಙದೆ ಬಂದಿಲ್ಲ. ಈ ಸ್ಥಳ ಸರ್ಕಾರಿ ಗೋಮಾಳವಾಗಿದ್ದು, ಇಲ್ಲಿ ಅಕ್ರಮ ನಡೆಸಿರುವವರನ್ನು ಪತ್ತೆ ಹಚ್ಚಲು ತಹಶೀಲ್ದಾರ್ ಅವರೊಡನೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಂಧ್ಯಾ ತಿಳಿಸಿದರು.