ಸುದ್ದಿ ಕಡೂರು: ಮೀಸಲಾತಿ ವಂಚಿತ ಸಮುದಾಯಕ್ಕೆ ನ್ಯಾಯದೊರಕಿಸಲು ಆರ್ಎಸ್ಎಸ್ ಮುಂಚೂಣಿಯಲ್ಲಿದೆ. ಬಿಜೆಪಿ ಪಕ್ಷವು ಮಾದಿಗ ಸಮಾಜಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ಸಂಘ ಪರಿವಾರದವರು ಮಾದಿಗ ಸಮಾಜಕ್ಕೆ ಮೀಸಲಾತಿ ದೊರಕಿಸಲು ಪ್ರಾಮಾಣಿಕವಾಗಿ ಒತ್ತು ನೀಡುತ್ತಿದ್ದಾರೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅಭಿಪ್ರಾಯಿಸಿದರು. ತಾಲ್ಲೂಕಿನ ಮಚ್ಚೇರಿಯಲ್ಲಿ ಬುಧವಾರ ನಡೆದ ಮಾದಿಗ ಮುನ್ನಡೆ – ಮಾದಿಗರ ಆತ್ಮಗೌರವ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮಾದಿಗ ಸಮುದಾಯದವರು ಯಾಕೆ ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೇರಲು ಆಗುತ್ತಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಬೇಕು.ಸಮಾನತೆ ಸಾಕಾರವಾದಾಗ ಮಾದಿಗ ಸಮುದಾಯದವರೂ ಸಹ ಸ್ವಾಭಿಮಾನದಿಂದ ಬಾಳಲು ಸಾಧ್ಯವಾಗುತ್ತದೆ. ಸದಾಶಿವ ಆಯೋಗದ ವರದಿ ಮಾದಿಗ ಸಮುದಾಯದ ಒಳಿತನ್ನೆ ಆದರಿಸಿದೆ. ಅಪಪ್ರಚಾರಗಳಿಗೆ ಗಮನ ನೀಡುವ ಅವಶ್ಯಕತೆಯಿಲ್ಲ. ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಯಾಗಬೇಕು. ಮಾದಿಗರಿಗೆ ಒಳಮೀಸಲಾತಿ ನ್ಯಾಯವಾಗಿ ದೊರೆಯಲೇಬೇಕು. ಈ ಹೋರಾಟದಲ್ಲಿ ನಾನು ಸದಾ ಸಕ್ರಿಯವಾಗಿರುತ್ತೇನೆ. ಮಾದಿಗ ಸಮಯದಾಯ ನಿರುತ್ಸಾಹಗೊಳ್ಳದೆ ಉತ್ಸಾಹದಿಂದ ಹೋರಾಡಬೇಕು. ಶೀಘ್ರದಲ್ಲಿಯೇ ನಮ್ಮ ಪರವಾದ ವಾತಾವರಣ ಸೃಷ್ಟಿಯಾಗಲಿದೆಯೆಂಬ ಆಶಯ ನನ್ನದು ಎಂದರು.
ಅಪಪ್ರಚಾರಗಳಿಗೆ ಗಮನ ಕೊಡುವ ಅವಶ್ಯಕತೆಯಿಲ್ಲ-ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಸಿದ್ದರಾಮಯ್ಯ ಕೃಪಾಪೋಷಿತ ನಾಟಕ ಮಂಡಳಿಯ ಸಮಾವೇಶ ಸಧ್ಯದಲ್ಲೆ ನಡೆಯಲಿದೆ.ಕಾಂತರಾಜ ವರದಿ ಜಾರಿಗಾಗಿ ಈ ಸಮಾವೇಶವೆನ್ನುತ್ತಾರೆ. ಕಾಂತರಾಜು ವರದಿಯನ್ನು ಕೈಯ್ಯಲ್ಲೂ ಮುಟ್ಟದವರು ಇದನ್ನು ಮಾಡಬಹುದೆ ಎಂಬುದೇ ಪ್ರಶ್ನೆ. ಅವರ ಸುಳ್ಳುಗಳು, ಒಳಮೀಸಲಾತಿ ವಿಚಾರದಲ್ಲಿ ಅವರ ನಾಟಕದ ಮಾತುಗಳಿಗೆ ಅತೀ ಶೀಘ್ರದಲ್ಲಿಯೇ ಪ್ರತ್ಯುತ್ತರ ದೊರೆಯಲಿದೆ.ಒಳ್ಳೆಯ ದಿನಗಳು ಮುಂದಿವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ದೀಪಕ್ ದೊಡ್ಡಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಂಜೀವ್ ಐಹೊಳೆ, ಶಿವಾನಂದ ಟವಳೆ, ಮಂಜುನಾಥ್ ಡಿ ಅನೇಕಲ್, ಹಂಸವೇಣಿ, ರಾಜಪ್ಪ ಬುಲ್ಲಳ್ಳಿ, ಮಂಜುನಾಥಕೊಂಡಪಲ್ಲಿ, ಶೂದ್ರ ಶ್ರೀನಿವಾಸ್, ಹುಲ್ಲೇಹಳ್ಳಿ ಲಕ್ಷ್ಮಣ್, ತಂಗಲಿ ರಾಘವೇಂದ್ರ, ಸಗನಪ್ಪ, ಹನುಮಂತಪ್ಪ, ವಾಸು ಕೆ.ವೈ, ಪ್ರಶಾಂತ್, ಗಣೇಶ್, ಕೇದಿಗೆರೆ ಬಸವರಾಜ್, ದೇವರಾಜ್ ನಂಜುಂಡ, ಪ್ರಸನ್ನ ರುದ್ರಪ್ಪ, ಸುರೇಶ್ ಮತ್ತಿತರಿದ್ದರು.