ಸುದ್ದಿ ಕಡೂರು : ತಾಲ್ಲೂಕಿನ ಚೌಳಹಿರಿಯೂರು ಹೋಬಳಿ ವ್ಯಾಪ್ತಿಯ ಕಲ್ಕರೆ ಗ್ರಾಮ ಪಂಚಾಯಿತಿಯ ರೈತ ಫಲಾನುಭವಿಗಳಿಗೆ 2022-23ನೇ ಸಾಲಿನ ನೆರೆ ಪರಿಹಾರಕ್ಕೆ ಮಂಜೂರಾದ ಹಣವನ್ನು ಅಕ್ರಮವಾಗಿ ಬೇರೆಯವರ ಬ್ಯಾಂಕ್ ಖಾತೆಗೆ ಸಂದಾಯ ಮಾಡಿ ರೈತರಿಗೆ ಹಾಗೂ ಸರಕಾರಕ್ಕೆ ವಂಚನೆ ಮಾಡಿರುವ ಈ ಹಿಂದಿನ ಗ್ರಾಮ ಲೆಕ್ಕಾಧಿಕಾರಿ ಪಾಲಾಕ್ಷಪ್ಪ ಜೊತೆಗೂಡಿ ಕಲ್ಕರೆ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಮಲ್ಲಿಕಾರ್ಜುನ್ ಬೆಳೆ ಪರಿಹಾರ ನಿಧಿಯಲ್ಲಿ ಶಾಮೀಲಾಗಿರುವ ಹಿನ್ನಲೆಯಲ್ಲಿ ಪಂಚಾಯಿತಿಯ ಸೇವೆಯಿಂದ ವಜಾಗೊಳಿಸುವಂತೆ ಶನಿವಾರ ಪಂಚಾಯಿತಿ ಕಚೇರಿಯ ಮುಂದೆ ಗ್ರಾಮಸ್ಥರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡರಾದ ಯತೀಶ್, ಲಕ್ಷ್ಮಣ್, ಶಶಿಕುಮಾರ್, ಪ್ರಭುಕುಮಾರ್, ಗೋವಿಂದಪ್ಪ, ಶಿವರಾಜ್, ಶೇಖರಪ್ಪ, ತಮ್ಮಯ್ಯಣ್ಣ ಮತ್ತಿತರಿದ್ದರು.
ಗ್ರಾಮಸ್ಥರ ದೂರಿನ ಹಿನ್ನಲೆಯಲ್ಲಿ ಬಳಿಕ ಪಂಚಾಯಿತಿಯಲ್ಲಿ ಅಧ್ಯಕ್ಷೆ ಆಶಾರಾಣಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಡಿಇಒ ಮಲ್ಲಿಕಾರ್ಜುನ್ ಇವರ ಮೇಲೆ ಗ್ರಾಮದ ಬೆಳೆ ಪರಿಹಾರ ನಿಧಿಯಲ್ಲಿ ಅವ್ಯವಹಾರ ಮಾಡಿರುವ ಬಗ್ಗೆ ಹಾಗೂ ಗ್ರಾಪಂನಲ್ಲಿ ಅನಧಿಕೃತ ಗೈರು ಹಾಜರಾಗಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪಂಚಾಯಿತಿಯಿಂದ ಮೂರು ತಿಂಗಳು ಕಾಲ ಸೇವೆಯಿಂದ ಅಮಾನತ್ತಿನಲ್ಲಿಡಲಾಗಿದೆ ಎಂದು ಕಲ್ಕರೆ ಪಂಚಾಯಿತಿ ಪಿಡಿಒ ಬಿ. ಅಮೃತೇಶ್ ತಿಳಿಸಿದ್ದಾರೆ.