ಸುದ್ದಿಕಡೂರು: ಮರ್ಯಾದ ಪುರುಷೋತ್ತಮ ಶ್ರೀ ರಾಮನ ಸ್ತುತಿಸುವ ಭಕ್ತಿ ಕೋಟಿಯೇ ಇದೆ. ಆದರೆ ಪಟ್ಟಣದ 89ರ ಹಿರಿಯ ವೃದ್ದರೊಬ್ಬರು ಸತತ 17 ವರ್ಷಗಳಿಂದ ನಿರಂತರವಾಗಿ 1.20 ಕೋಟಿ ಅಧಿಕ ರಾಮನಾಮವನ್ನು ಬರೆಯುವ ಮೂಲಕ ಆಧ್ಯಾತ್ಮಿಕತೆಯ ಭಕ್ತಿಯಲ್ಲಿ ತಲ್ಲೀನರಾಗಿದ್ದಾರೆ.
ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಪ್ರಧಾನ ಗುರುಸ್ವಾಮಿಗಳಾದ ಕೆ.ಪರಮೇಶ್ವರನ್ ಸ್ವಾಮಿ ಅವರು ಪ್ರತಿನಿತ್ಯ ಎರಡು ತಾಸು ಬಿಡುವಿನ ಕಾರ್ಯದ ವೇಳೆ ರಾಮನಾಮವನ್ನು ಸ್ಮರಿಸುತ್ತ 19 ಪುಸ್ತಕಗಳಲ್ಲಿ ರಾಮನ ಜಪದೊಂದಿಗೆ ತನ್ನ ಭಕ್ತಿಯ ಸಂಕಲ್ಪವನ್ನು ಇಂದಿಗೂ ಮುಂದುವರೆಸುತ್ತಿದ್ದಾರೆ. ಕಳೆದ 2007ರಿಂದ ಈ ಅಭಿಯಾನವನ್ನು ಆರಂಭಿಸಿದ್ದು, ಪ್ರಸ್ತುತ ಕಾಕತಾಳಿಯವಾಗಿ ಅಯೋಧ್ಯೆಯ ಶ್ರೀ ರಾಮಲ್ಲಾಲ ಮಂದಿರ ಉದ್ಘಾಟನೆಯ ದಿನಗಣನೆಯಲ್ಲಿ ಕೋಟಿ ರಾಮನಾಮವನ್ನು ಪೂರ್ಣಗೊಳಿಸಿರುವುದು ವಿಶೇಷವಾಗಿದ್ದು, ತಮ್ಮ ರಾಮನಾಮದ ಕೋಟಿ ಸಂಕಲ್ಪದ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ. ಜೊತೆಯಲ್ಲಿ ರಾಮನಾಮ ಬರೆಯಲು ಸಹಕರಿಸಿದ ಪೆನ್ನುಗಳನ್ನು ಕೂಡ ಸಂಗ್ರಹಿಸಿಟ್ಟಿರುವುದು ಗಮನಾರ್ಹ ಸಂಗತಿ.