ಸುದ್ದಿ ಕಡೂರು: ತಾಲ್ಲೂಕಿನ ಮಲ್ಲೇಶ್ವರದ ಗ್ರಾಮದೇವತೆ ಶ್ರೀ ಸ್ವರ್ಣಾಂಬ ದೇವಾಲಯದಲ್ಲಿ ಶ್ರೀಪಂಚಮಿ ಪ್ರಯುಕ್ತ ಬುಧವಾರ ಚಿಕ್ಕರಥೋತ್ಸವವು ನೂರಾರು ಸದ್ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ಜರುಗಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ನಡೆದ ನಂತರ ದೇವಿಯ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಸಕಲವಾದ್ಯಗಳ ಸಮೇತ ಕರೆತಂದು ಆಲಂಕೃತ ರಥದಲ್ಲಿ ಪ್ರತಿಷ್ಟಾಪಿಸಲಾಯಿತು. ನಂತರ ಭಕ್ತರು ರಥವನ್ನು ದೇವಸ್ಥಾನದಿಂದ ಗ್ರಾಮದೊಳಗಿನ ದೇವಸ್ಥಾನದ ತನಕ ಉತ್ಸಾಹದಿಂದ ಎಳೆದು ಸಂಭ್ರಮಿಸಿದರು.
ಗ್ರಾಮದ ಪ್ರತಿ ಮನೆಯಿಂದಲೂ ದೇವಿಗೆ ಆರತಿ ಸಮರ್ಪಿಸಿದ ನಂತರ ಬಳಿಕ ದೇವಸ್ಥಾನಕ್ಕೆ ರಥವನ್ನು ಕರೆತರಲಾಯಿತು. ಮೂಲಸ್ಥಾನದಲ್ಲಿ ಅಷ್ಟಾವಧಾನ ಸೇವೆ,ಲಲಿತಾ ಸಹಸ್ರನಾಮ ಪಠಣ, ಮಹಾಮಂಗಳಾರತಿ,ಪ್ರಸಾದ ವಿನಿಯೋಗ ನೆರವೇರಿತು. ಸಖರಾಯಪಟ್ಟಣದ ಸ್ವಾಮಿ ಭಟ್ಟರು, ದೇವೀಪ್ರಸಾದ್ ಶರ್ಮ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿ ಕಾರ್ಯಾಧ್ಯಕ್ಷ ಎಂ.ಟಿ.ಹನುಮ0ತಯ್ಯ, ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ಮತ್ತು ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.