ಸುದ್ದಿಕಡೂರು: ಶಾಲಾ ಆಡಳಿತ ಮಂಡಳಿಯಷ್ಟೆ ಜವಾಬ್ದಾರಿ ಶಾಲಾ ವಾಹನ ಚಾಲಕರಿಗೂ ಇರುತ್ತದೆ ಎಂದು ಪಿಎಸೈ ಧನಂಜಯ ತಿಳಿಸಿದರು.
ಬುಧವಾರ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಜ್ಞಾ ಶಾಲೆಯ ಚಾಲಕರಿಗೆ” ಶಾಲಾ ವಾಹನ ಚಾಲಕರಿಗೆ ತಿಳುವಳಿಕೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಬಗ್ಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುತ್ತದೆ. ಆದರೆ ಶಾಲೆಗೆ ಮಕ್ಕಳನ್ನು ಕರೆತರುವ ಮತ್ತು ಮನೆಗೆ ಬಿಡುವ ಕಾರ್ಯವನ್ನು ಮಾಡುವ ವಾಹನ ಚಾಲಕರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಚಾಲಕರು ಶಾಲೆಯ ನಿಯಮಗಳ ಜೊತೆ ವಾಹನ ಚಾಲನಾ ನಿಯಮಗಳ ಪಾಲನೆ ಕಡ್ಡಾಯವಾಗಿ ಮಾಡಬೇಕು. ಶಾಲಾ ಸಮಯಕ್ಕೆ ತಡವಾದರೆ ಅತೀವೇಗವಾಗಿ ಚಾಲನೆ ಮಾಡುವುದು, ಚಾಲನೆ ಮಾಡುವಾಗ ಮೊಬೈಲ್ ಬಳಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸಿವುದನ್ನು ಮಾಡಬಾರದು. ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು. ಚಾಲಕರು ಚಾಲನಾ ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು. ಅವಧಿ ಮುಗಿದ ಕೂಡಲೇ ನವೀಕರಿಸಬೇಕು. ಬಹುಮುಖ್ಯವಾಗಿ ಶಾಲಾ ಮಕ್ಕಳ ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಅತ್ಯಂತ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ತಮ್ಮ ನಡವಳಿಕೆಯೇ ಶಾಲೆಗೆ ಒಳ್ಳೆಯ ಹೆಸರು ತರುತ್ತದೆಯೆಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಪಿಎಸ್ಐ ಪವನ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.