ಸುದ್ದಿ ಕಡೂರು: ತಾಲ್ಲೂಕಿನ ಚೀಲನಹಳ್ಳಿ ಸಮೀಪದ ಕುರುಬಗೆರೆಯ ತೋಟದ ಮನೆಯೊಂದರ ಮುಂದೆ ನಾಯಿ ಹಿಡಿಯಲು ಚಿರತೆಯೊಂದು ಹೊಂಚುಹಾಕುತ್ತಾ ಕುಳಿತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ.
ಭರತ್ ಎಂಬುವವರ ತೋಟದ ಮನೆಯಲ್ಲಿ ಸುಮಾರು ನಾಲ್ಕೈದು ನಾಯಿಗಳಿವೆ. ಈ ನಾಯಿಯನ್ನು ಹಿಡಿಯಲು ಕಳೆದ ಮಾ.3ರ ತಡರಾತ್ರಿ ಚಿರತೆಯೊಂದು ಹೊಂಚು ಹಾಕಿ ಸುಮಾರು ಎರಡು ನಿಮಿಷಕ್ಕೂ ಹೆಚ್ಚು ಕಾಲ ಕುಳಿತಿದ್ದು, ನಂತರ ನಾಯಿಗಳು ಒಮ್ಮೆಲೆ ಬೊಗಳಿದಾಗ ಪರಾರಿಯಾದ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗ್ರಾಮೀಣ ಭಾಗದ ರೈತರು ರಾತ್ರಿ ವೇಳೆ ಕೃಷಿ ಚಟುವಟಿಕೆಗಳಿಗಾಗಿ ಓಡಾಡುತ್ತಿರುತ್ತಾರೆ. ಚಿರತೆಗಳ ಭೀತಿಯಿರುವುದರಿಂದ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.