ಸುದ್ದಿ ಕಡೂರು: ಪ್ರಸಕ್ತ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಕಡೂರು ತಾಲ್ಲೂಕಿನಲ್ಲಿ ಮಳೆಯಾಶ್ರಿತ ಕೃಷಿ ನೀತಿ 2014 ರನ್ವಯ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರವು ಅನುಮೋದಿಸಿದೆ. ಕೃಷಿ ಭಾಗ್ಯ ಯೋಜನೆಯು ಮಳೆಯಾಶ್ರಿತ ರೈತರ ಜೀವನ ಮಟ್ಟವನ್ನು ಸುಧಾರಿಸುವುದರೊಂದಿಗೆ ಬರ ಉಪಶಮನದ ಮುಖ್ಯ ಗುರಿಯನ್ನು ಹೊಂದಿದೆ. ಈ ಯೋಜನೆಯು ಕ್ಷೇತ್ರ ಬದು, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡಿಸೇಲ್, ಪೆಟ್ರೋಲ್ ಪಂಪ್ಸೆಟ್, ಸೋಲಾರ್ ಪಂಪ್ಸೆಟ್ ಲಘು ನೀರಾವರಿ ಘಟಕ ಹಾಗೂ ತಂತಿ ಬೇಲಿಯ ಸೌಲಭ್ಯವನ್ನು ಒಳಗೊಂಡಿರುತ್ತದೆ. ಆಯ್ಕೆಯಾಗುವ ರೈತರು ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಟ ಒಂದು ಎಕರೆ ವಿಸ್ತೀರ್ಣ ಇರಬೇಕು. ಅರ್ಜಿ ಸಲ್ಲಿಸುವ ರೈತರು ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವಾ ಇನ್ನಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿದ್ದಲ್ಲಿ ಸದರಿ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ. ಆಸಕ್ತಿಯುಳ್ಳ ರೈತರು ಡಿ.31 ರೊಳಗೆ ಅರ್ಜಿಗಳನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನರೈತ ಸಂಪರ್ಕ ಕೇಂದ್ರ ಅಥವಾ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು
ಸಂಪರ್ಕಿಸುವಂತೆ ಸಹಾಯಕ ಕೃಷಿನಿರ್ದೇಶಕ ಅಶೋಕ್ ತಿಳಿಸಿದ್ದಾರೆ.