ಸುದ್ದಿ ಕಡೂರು : ಶೌಚಕ್ಕೆಂದು ಹೋದ ವೃದ್ದೆಯೋರ್ವರು ರೈಲಿನ ಶೌಚಾಲಯದಲ್ಲಿ ಕೆಲಹೊತ್ತು ಪ್ರಜ್ಞೆ ತಪ್ಪಿ ಬಿದ್ದ ಹಿನ್ನೆಲೆಯಲ್ಲಿ ಸಮಯಪ್ರಜ್ಜೆಯಿಂದ ರೈಲ್ವೆ ಟಿಕೇಟ್ ತಪಾಸಣಾಧಿಕಾರಿ ಶೌಚಾಲಯದ ಬಾಗಿಲು ಮುರಿದು ವೃದ್ದೆಯನ್ನು ಪ್ರಾಣಾಪಾಯದಿಂದ ಕಾಪಾಡಿದ ಘಟನೆಯೊಂದು ಮೈಸೂರು-ತಾಳಗುಪ್ಪ ಎಕ್ಸ್ಪ್ರೆಸ್ ರೈಲು ಗಾಡಿಯಲ್ಲಿ ನಡೆದಿದೆ. ಸಾಗರ ಮೂಲದ ಶ್ರೀನಿಧಿ ಮತ್ತು ಬಸವರಾಜ್ ವೃದ್ದ ದಂಪತಿಗಳಿಬ್ಬರು ಮೈಸೂರಿನಿಂದ ಪ್ರಯಾಣ ಆರಂಭಿಸಿದ್ದು, ಬಳಿಕ ರೈಲು ಗಾಡಿಯು ಅರಸೀಕೆರೆ ನಿಲ್ದಾಣ ನಿರ್ಗಮಿಸುತ್ತಿದ್ದಂತೆ ಶೌಚಕ್ಕೆಂದು ತೆರಳಿದ ವೃದ್ದೆ ಶ್ರೀನಿಧಿ ಅವರು ಶೌಚಾಲಯದ ಕೊಠಡಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೆಲ ಹೊತ್ತು ಕಳೆದರೂ ಪತ್ನಿ ಹೊರಗಡೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪತಿ ಬಸವರಾಜ್ ರೈಲ್ವೆ ಟಿಕೆಟ್ ತಪಾಸಣಾಧಿಕಾರಿ ಸಿ.ಎಸ್ ಬಾಸ್ಕರ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಟಿಕೆಟ್ ತಪಾಸಣಾ ಅಧಿಕಾರಿ ಸಿನಿಮೀಯ ಶೈಲಿಯ ರೀತಿಯಲ್ಲಿ ಶೌಚಾಲಯದ ಕೊಠಡಿಯ ಕೆಳಭಾಗದ ಪ್ಲೇವುಡ್ ಶೀಟನ್ನು ಮುರಿದು ಹೊರತರುವ ಪ್ರಯತ್ನ ನಡೆಸಿ ರೈಲಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ.
ರೈಲ್ವೆ ತಪಾಸಣಾಧಿಕಾರಿ ಸಿ.ಎಸ್. ಭಾಸ್ಕರ್ ಅವರ ಸಮಯೋಚಿತ ನಡೆಗೆ ರೈಲ್ವೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದಂಪತಿಗಳ ಪುತ್ರನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿರುವ ಬಗ್ಗೆ ಮೈಸೂರು ರೈಲ್ವೆ ವಿಭಾಗದ ಮತ್ತು ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿಕೊಂಡು ಸಾಮಾಜಿಕ ಜಾಲಾತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.