ಸುದ್ದಿ ಕಡೂರು : ಬೀರೂರು ಪಟ್ಟಣದ ಪುರಿಭಟ್ಟಿ ಪ್ರದೇಶದ ಮನೆಯೊಂದರಲ್ಲಿ 9.45ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳುವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೀರೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ಸಲೀಂ ಮತ್ತು ಮೊಹ್ಮದ್ ಫರ್ದೀನ್ ಇಬ್ಬರು ಬಂಧಿತ ಆರೋಪಿಗಳಾಗಿದ್ದು. ಕಳೆದ ಡಿ.30ರಂದು ಬೀರೂರಿನ ಪುರಿಭಟ್ಟಿ ನಿವಾಸಿಯಾದ ದಾದಾಪೀರ್ ಎಂಬಾತನ ಮನೆಗೆ ಆರೋಪಿತರು ಮನೆಗೆ ನುಗ್ಗಿ ಮನೆಯ ಬೀರುವಿನನಲ್ಲಿದ್ದ ಚಿನ್ನಾಭರಣಗಳು ಹಾಗೂ 6.50ಲಕ್ಷ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಘಟನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಬೀರೂರು ಪೊಲೀಸರು ಡಿವೈಎಸ್ಪಿ ಹಾಲುಮೂರ್ತಿ ರಾವ್ ಮಾರ್ಗದರ್ಶನದೊಂದಿಗೆ ಸಿಪಿಐ ಎಸ್.ಎನ್. ಶ್ರೀಕಾಂತ್ ನೇತೃತ್ವದ ತಂಡ ಆರೋಪಿತರ ಪತ್ತೆಗಾಗಿ ಕಾರ್ಯಚರಣೆ ನಡೆಸಿ ಖಚಿತ ಮಾಹಿತಿಯೊಂದಿಗೆ ಶಿವಮೊಗ್ಗದ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳ್ಳತನ ಪ್ರಕರಣದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಇಬ್ಬರಿಂದ 97ಗ್ರಾಂ ತೂಕದ ಆಭರಣಗಳು, 4.20ಲಕ್ಷ ನಗದು ಹಣ, ಬಜಾಜ್ ಸಿಟಿ 100ಬೈಕ್ ಸೇರಿದಂತೆ 9.45ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ಸಜಿತ್ ಕುಮಾರ್, ಹೆಡ್ ಕಾನ್ಸ್ ಸ್ಟೇಬಲ್ ಗಳಾದ ಡಿ.ವಿ.ಹೇಮಂತ್ ಕುಮಾರ್, ಕೃಷ್ಣಮೂರ್ತಿ, ಶಿವಕುಮಾರ್, ರಾಜಪ್ಪ ಇದ್ದರು.