ಸುದ್ದಿ ಕಡೂರು : ಕಡೂರು-ಬೀರೂರು ನಡುವಿನ ಅಮೃತಮಹಲ್ ತಳಿ ಸಂವರ್ಧನ ಕೇಂದ್ರದಲ್ಲಿ ಬುಧವಾರ ತಳಿಯ ರಾಸುಗಳ ಹರಾಜು ಪ್ರಕ್ರಿಯೆ ಭರ್ಜರಿಯಾಗಿ ನಡೆಯಿತು.
ರಾಜ್ಯದ ಹಾವೇರಿ, ರಾಣಿಬೆನ್ನೂರು, ಶಿಕಾರಿಪುರ, ಚಿತ್ರದುರ್ಗ ಶಿವಮೊಗ್ಗ ಚಿಕ್ಕಮಗಳೂರು ಹಾಗೂ ಹಾಸನ ಮತ್ತಿತರ ಜಿಲ್ಲೆಗಳ ಭಾಗದಿಂದ ಆಗಮಿಸಿದ್ದ ನೂರಾರು ರೈತರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಬೆಳಗಿನಿಂದ ಆರಂಭವಾದ ಈ ಹರಾಜು ಪ್ರಕ್ರಿಯೆಯಲ್ಲಿ ಅಜ್ಜಂಪುರ, ಲಿಂಗದಹಳ್ಳಿ ಬಾಸೂರು, ಚಿಕ್ಕಎಮಿಗನೂರು, ರಾಮಗಿರಿ ,ಹಬ್ಬನಘಟ್ಟ, ಬಿಳುವಾಲ, ಬಿದರೆ ಕಾವಲು, ರಾಯಸಂದ್ರ ಈ 9 ಅಮೃತಮಹಲ್ ಕೇಂದ್ರಗಳಿಂದ ಇಲ್ಲಿಗೆ ಆಗಮಿಸಿದ್ದ ನೂರಾರು ರಾಸುಗಳನ್ನು ಕ್ರಮವಾಗಿ ವಿಂಗಡಿಸುವುದರ ಮೂಲಕ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಅಜ್ಜಂಪುರ ಸಂವರ್ಧನ ಕೇಂದ್ರದಿಂದ ಬಂದಿದ್ದ ಎ-21/22 ಗಾಳಿಕೆರೆ ಮತ್ತು ನಾರಾಯಣಿ ಎಂಬ 2ವರ್ಷದ ರಾಸು 2.12 ಲಕ್ಷ ಗರಿಷ್ಠ ಬೆಲೆಗೆ ಸೊರಬ ತಾಲ್ಲೂಕಿನ ಯಲವಳ್ಳಿ ಗ್ರಾಮದ ರಾಮಚಂದ್ರಪ್ಪ ರವರಿಗೆ ಮಾರಾಟವಾಯಿತು.
ಎಲ್19 ಮತ್ತು 15 ಎಂಬ ಬೀಜದ ಓಬಳಾದೇವಿ ಹೋರಿಕರು 1.52 ಲಕ್ಷ ಮೊತ್ತಕ್ಕೆ ಸೊರಬ ತಾಲ್ಲೂಕಿನ ಹಿರೇಚೌಟಿಯ ರಾಜುಗೌಡರಿಗೆ ಪಡೆದುಕೊಂಡರು.
ಹರಾಜು ಪ್ರಕ್ರಿಯೆಯಲ್ಲಿ 450 ಜನ ರೈತರು ಪಾಲ್ಗೊಂಡಿದ್ದು , ಒಟ್ಟಾರೆ 200 ರಾಸುಗಳು ಬಿಕರಿಯಾಗಿದ್ದು 99.46ಲಕ್ಷ ಈ ಹರಾಜು ಪ್ರಕ್ರಿಯೆಯಿಂದ ಅಮೃತ ಮಹಲ್ ತಳಿ ಸಂವರ್ಧನ ಕೆಂದ್ರಕ್ಕೆ ಸಂದಾಯವಾಯಿತು ಎಂದು ಬೀರೂರು ಅಮೃತ ಮಹಲ್ ತಳಿ ಸಂವರ್ದನ ಕೇಂದ್ರದ ಡಾ.ಎ.ಬಿ.ಪ್ರಭಾಕರ್ತಿಳಿಸಿದರು.
ಬೆಂಗಳೂರಿನ ಪಶುಪಾಲನ ಮತ್ತು ಪಶುವೈದ್ಯ ಸೇವ ಇಲಾಖೆಯ ಪ್ರಧಾನ ಕಾರ್ಯದರ್ಶಿ ತು ಳಸಿ ಮದ್ದಿನೇನಿ ಹರಾಜು ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹರಾಜು ಪ್ರಕ್ರಿಯೆಯಲ್ಲಿ ಬೆಂಗಳೂರಿನ ಪಶುಪಾಲನಮತು ಪಶುವೈದ್ಯ ಇಲಾಖೆ ನಿರ್ದೇಶಕರಾದ ಪಿ.ಶ್ರೀನಿವಾಸ್ ಜಂಟಿ ನಿರ್ದೇಶಕ ಕೃಷ್ಣಪ್ಪ, ಸಹಾಯಕ ಅಧಿಕಾರಿ ಡಾ.ರಾಘವೇಂದ್ರ, ಕ್ಷೇತ್ರದ ಅಧಿಕಾರಿ ಡಾ.ಪ್ರಭಾಕರ್, ರಾಜ್ಯ ವಲಯ ಜಂಟಿ ನಿರ್ದೇಶಕರಾದ ಡಾ.ವೀರಭದ್ರಯ್ಯ, ಚಿಕ್ಕಮಗಳೂರು ಜಿಲ್ಲೆಯ ಡಾ.ಮೋಹನ್, ಕಡೂರು ತಾಲ್ಲೂಕು ಸಹಾಯಕ ನಿರ್ದೇಶಕ ಎಸ್.ಬಿ.ಉಮೇಶ್, ಮತ್ತು ಅಜ್ಜಂಪುರ-ಕಡೂರು ತಾಲ್ಲೂಕಿನ ಪಶು ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.