ಸುದ್ದಿಕಡೂರು : ತಾಲ್ಲೂಕಿನ ಚೌಳಹಿರಿಯೂರು ಕಂದಾಯ ವೃತ್ತದಲ್ಲಿ ನೆರೆ ಪರಿಹಾರದ ಹಣ ವಿತರಣೆಯಲ್ಲಿ ಆಗಿರುವ ಅವ್ಯವಹಾರದ ಪ್ರಕರಣವು ತನಿಖೆಯ ಹಂತದಲ್ಲಿದ್ದಾಗಲೇ ಗ್ರಾಮದ ನಾಲ್ವರು ವ್ಯಕ್ತಿಗಳು ನೆರೆ ಪರಿಹಾರದ ಹಣ ತಮ್ಮ ಖಾತೆಗೆ ಜಮೆಯಾಗಿರುವ ತಲಾ 49,749 ರೂ ಹಣವನ್ನು ಸರಕಾರಕ್ಕೆ ವಾಪಸ್ಸು ನೀಡಲು ತಹಸೀಲ್ದಾರ್ ಬಳಿ ಅರ್ಜಿ ಸಲ್ಲಿಸಿದ್ದಾರೆ.
ನೆರೆ ಪರಿಹಾರದ ಪ್ರಕರಣವು ದಿನ ಕಳೆದಂತೆ ದೊಡ್ಡ ಮಟ್ಟದಲ್ಲಿ ತನಿಖೆ ನಡೆಯುತ್ತಿದ್ದು, ಏಳು ದಿನಗಳ ಹಿಂದೆ ಕಲ್ಕೆರೆ ಗ್ರಾಮದ ನಾಲ್ವರು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ನಮ್ಮ ಗಮನಕ್ಕೆ ಬಾರದಂತೆ ಖಾತೆಗೆ ಹಣ ಬಂದಿದೆ.ಅದನ್ನು ಸರ್ಕಾರಕ್ಕೆ ವಾಪಸ್ಸು ಮಾಡುತ್ತೇವೆ ಎಂದು ಕೋರಿದ್ದಾರೆ.ತಹಶೀಲ್ದಾರ್ ಅವರು ಈ ಕುರಿತು ಅರ್ಜಿ ನೀಡಲು ಸೂಚಿಸಿದ್ದಾರೆ. ಅದರಂತೆ ಅವರು ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ನಡೆಸಲು ರಾಜಸ್ವ ನಿರೀಕ್ಷಕರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.