ಸುದ್ದಿಕಡೂರು : ಮನೆಯ ಮುಂದೆ ಬಸ್ ನಿಲ್ಲಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೆ.ಎಸ್.ಆರ್.ಟಿ.ಸಿ.ಬಸ್ ಚಾಲಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಆಣೇಗೆರೆ ನಾರಣಾಪುರ ಗ್ರಾಮದಲ್ಲಿ ನಡೆದಿದೆ.
ಕಡೂರು ಡಿಪೋ ಬಿ.ವೈ.ರೇಣುಕಾರಾಧ್ಯ ಹಲ್ಲೆಗೊಳಗಾದ ಚಾಲಕ.ಪಂಚನಹಳ್ಳಿಯಿಂದ ಮಧ್ಯಾಹ್ನ 2-45 ಕ್ಕೆ ಕಡೂರಿಗೆ ಹೊರಟ ಕೆ.ಎಸ್.ಆರ್.ಟಿ.ಸಿ. ಬಸ್ ಆಣೇಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಸಾಗುವಾಗ ಎ.ಜಿ.ಮಂಜುನಾಥ್ ತನ್ನ ಮನೆಯ ಹತ್ತಿರ ಪತ್ನಿಯನ್ನು ಬಸ್ಗೆ ಹತ್ತಿಸುವ ಸಲುವಾಗಿ ಬಸ್ ನಿಲ್ಲಿಸುವಂತೆ ಚಾಲಕನಿಗೆ ಕೈ ತೋರಿಸಿದ್ದಾರೆ.ನಿಲ್ದಾಣವಲ್ಲದ ಕಾರಣ ಚಾಲಕ ರೇಣುಕಾರಾಧ್ಯ ಬಸ್ ನಿಲ್ಲಸದೆ ಮುಂದೆ ಸಾಗಿದ್ದಾರೆ.ಕೂಡಲೆ ಮಂಜುನಾಥ್ ತನ್ನ ದ್ವಿಚಕ್ರ ವಾಹನದಲ್ಲಿ ಹೆಂಡತಿಯನ್ನು ಕೂರಿಸಿಕೊಂಡು ಬಸ್ ಹಿಂಬಾಲಿಸಿದ್ದಾನೆ.ಮುಂದಿನ ನಿಲ್ದಾಣವಾದ ನಾರಣಾಪುರ ಗ್ರಾಮದಲ್ಲಿ ನಿಂತಿದ್ದ ಬಸ್ಗೆ ಹೆಂಡತಿಯನ್ನು ಹತ್ತಿಸಿ ಮುಂದೆ ಬಂದು ಚಾಲಕನ ಬಳಿ ಮಾತಿನ ಚಕಮಕಿ ನಡೆಸಿ ಹಲ್ಲೆ ನಡೆಸಿದ್ದಾನೆ.
ಈ ಕುರಿತು ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.