ಸುದ್ದಿ ಕಡೂರು : ತಾಲ್ಲೂಕಿನ ಹುಲಿಗೊಂದಿ ಸಮೀಪದ ಎಚ್.ಹೊಸೂರು ಗ್ರಾಮದ ಅಜ್ಜನ ಮನೆಯಲ್ಲಿದ್ದ ಯುವಕನಿಗೆ ಕರೆ ಮಾಡಿ ಕರೆಸಿಕೊಂಡ ಸ್ನೇಹಿತರು ಯುವಕನ ಕತ್ತುಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಬೆಂಗಳೂರಿನಲ್ಲಿ ಖಾಸಗಿಯಾಗಿ ಕೆಲಸ ಮಾಡಿಕೊಂಡಿದ್ದ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಾರಿಬೀಳು ಗ್ರಾಮದ ದರ್ಶನ್(21) ಹತ್ಯೆಗೀಡಾದ ಯುವಕನಾಗಿದ್ದು, ಕಳೆದ ಒಂದು ತಿಂಗಳು ಹೊಸೂರು ಗ್ರಾಮದ ಅಜ್ಜ ಮಲ್ಲೇಶಪ್ಪನ ಮನೆಗೆ ಬಂದು ಉಳಿದುಕೊಂಡಿದ್ದನು. ದರ್ಶನ್ ಜೊತೆಯಲ್ಲಿ ನಾಲ್ಕೈದು ಜನ ಸ್ನೇಹಿತರು ಕೂಡ ಕಳೆದ 15 ದಿನಗಳ ಹಿಂದೆ ಗ್ರಾಮದಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ಬಳಿಕ ಸ್ನೇಹಿತರು ಬೆಂಗಳೂರಿಗೆ ತೆರಳಿದ ಹಿನ್ನಲೆಯಲ್ಲಿ ಗುರುವಾರದಂದು ದರ್ಶನ್ ಗೆ ಕರೆ ಮಾಡಿ ಕಡೂರಿಗೆ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ನೇಹಿತರ ಜೊತೆ ಹೋಗಿ ಬರುವುದಾಗಿ ತಡರಾತ್ರಿ ದರ್ಶನ್ ಮನೆಯಲ್ಲಿ ತಿಳಿಸಿ ಹೊರ ಹೋದವನು ಗ್ರಾಮದ ಜಮೀನುವೊಂದರಲ್ಲಿ ಶವವಾಗಿ ಶುಕ್ರವಾರ ಪತ್ತೆಯಾಗಿದ್ದಾನೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರ್ಶನ್ ಜೊತೆಗಿದ್ದ ಸ್ನೇಹಿತರುಗಳು ಸೇರಿ ಬೆಂಗಳೂರಿನ ರಾಜಾರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಜ.22ರಂದು ಕೊಲೆಯತ್ನ ಪ್ರಯತ್ನ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಶ್ರೀಧರ್, ಮಂಜುನಾಥ್ ಸೇರಿದಂತೆ ಇತರೆ ಸ್ನೇಹಿತರು ಕೂಡ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೊಸೂರು ಗ್ರಾಮದ ದರ್ಶನ್ ಅಜ್ಜನ ಮನೆಯಲ್ಲಿ ಸ್ನೇಹಿತರುಗಳು ಕೆಲದಿನಗಳಷ್ಟು ಉಳಿದುಕೊಂಡಿದ್ದರು. ಹಣಕಾಸಿಗೆ ತೊಂದರೆಯಾದ ಕೂಡಲೇ ಸ್ನೇಹಿತರುಗಳು ಬೆಂಗಳೂರಿಗೆ ತೆರಳಿದ್ದಾರೆ. ಆದರೆ ದರ್ಶನ್ಗೆ ಸ್ನೇಹಿತರು ಕೊಲೆ ಮಾಡಲು ಬಲವಾದ ಕಾರಣದ ಬಗ್ಗೆ ತನಿಖೆಯಲ್ಲಿ ಬಹಿರಂಗಗೊಳ್ಳಬೇಕಿದ್ದು, ಆರೋಪಿಗಳ ಪತ್ತೆಗಾಗಿ ಕಾರ್ಯಚರಣೆ ಚುರುಕುಗೊಂಡಿದೆ. ಶನಿವಾರ ಆರೋಪಿಗಳು ಪತ್ತೆಯಾಗುವ ಸಾಧ್ಯತೆಗಳಿವೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಡಾ. ವಿಕ್ರಮ್ ಅಮಟೆ, ಡಿವೈಎಸ್ಪಿ ಹಾಲಮೂರ್ತಿರಾವ್ ಭೇಟಿ ನೀಡಿ ಆರೋಪಿಗಳ ಪತ್ತೆಗಾಗಿ ತನಿಖೆಯ ತಂಡವನ್ನು ರಚಿಸಿ ಮುಂದಿನ ಕ್ರಮಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಪಿಎಸೈ ಧನಂಜಯ್ ಹಾಗೂ ಸಿಬ್ಬಂದಿಗಳು ಮತ್ತಿತರಿದ್ದರು.