ಸುದ್ದಿ ಬೀರೂರು : ವ್ಯಕ್ತಿಯೊಬ್ಬರ ಬಳಿ ಇದ್ದ ಹಳೆಯ ಕ್ರೆಡಿಟ್ ಕಾರ್ಡ್ಗಳನ್ನು ಹೊಸಕಾರ್ಡ್ಗಳನ್ನಾಗಿ ಮಾಡಿಕೊಡುವುದಾಗಿ ನಂಬಿಸಿ 3.29 ಲಕ್ಷ ಹಣ ದೋಚಿದ ಆರೋಪಿಯನ್ನು ಬೀರೂರು ಪೊಲೀಸರು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ಹಿರೇಬಳ್ಳೇಕೆರೆ ಗ್ರಾಮದ ಪ್ರತಾಪ್ ಬಂಧಿತ ಆರೋಪಿಯಾಗಿದ್ದು, ಹೊಗರೇಹಳ್ಳಿ ಗ್ರಾಮದ ಪ್ರದೀಪ್ ಎಂಬುವವರಿಗೆ 2023ರ ಸಾಲಿನಲ್ಲಿ ಆಕಾರ ಕ್ಯಾಪಿಟಲ್ ಬ್ಯಾಂಕ್ ಹೆಸರಿನಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಅವರ ಬಳಿ ಇದ್ದ 4 ಕ್ರೆಡಿಟ್ ಕಾರ್ಡ್ಗಳನ್ನು ಬದಲಾಗಿ ಹೊಸ ಕ್ರೆಡಿಟ್ ಕಾರ್ಡ್ಗಳನ್ನು ಕೊಡುತ್ತೇವೆಂದು ನಂಬಿಸಿ 3.29 ಲಕ್ಷ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದು, ಈ ಕುರಿತಾಗಿ ಬೀರೂರು ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿತ್ತು. ಬಳಿಕ ಆರೋಪಿಯ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ಡಿವೈಎಸ್ಪಿ ಹಾಲಮೂರ್ತಿರಾವ್ ಮಾರ್ಗದರ್ಶನದೊಂದಿಗೆ ಮಾಹಿತಿ ಕಲೆಹಾಕಿದ ಬೀರೂರು ಪೊಲೀಸರು ಆರೋಪಿತ ವ್ಯಕ್ತಿಯನ್ನು ಖಚಿತ ಮಾಹಿತಿಯ ಮೇರೆಗೆ ವಶಕ್ಕೆ ಪಡೆದು ಪ್ರಕರಣದ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡ ಆರೋಪಿತ ವ್ಯಕ್ತಿಯಿಂದ 1 ಲಕ್ಷ ನಗದು ಹಣವನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.
ತನಿಖೆಯ ಕಾರ್ಯಾಚರಣೆಯಲ್ಲಿ ಬೀರೂರು ಸಿಪಿಐ ಎಸ್.ಎನ್. ಶ್ರೀಕಾಂತ್, ಪಿಎಸೈ ಬಿ.ಆರ್. ಸಜಿತ್ಕುಮಾರ್, ಸಿಬ್ಬಂದಿಗಳಾದ ಡಿ.ವಿ.ಹೇಮಂತ್ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ವಿ.ಟಿ. ಶಿವಕುಮಾರ್, ರಾಜಪ್ಪ ತಂಡದಲ್ಲಿದ್ದರು.