ಸುದ್ದಿ ಕಡೂರು : ಮಣ್ಣಿನ ಫಲವತ್ತತೆಯನ್ನು ಕಾಪಾಡಿದರೆ ಸಮೃದ್ದ ಬೆಳೆಗಳ ಇಳುವರಿಯನ್ನು ಉತ್ತಮಗೊಳಿಸಲು ಸಾಧ್ಯವಾಗಲಿದೆ ಎಂದು ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ಎಸ್,ನಾರಾಯಣ್ ಮಾವರ್ಕರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹುಲಿಕೆರೆ ಗ್ರಾಮದಲ್ಲಿ ಮಂಗಳವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯ ಶಿವಮೊಗ್ಗ ,ಅಡಿಯಲ್ಲಿ ಬರುವ ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ ,ಗ್ರಾಮೀಣ ತೋಟಗಾರಿಕೆ ಕಾರ್ಯಾ ನುಭವ ಶಿಬಿರ ಇದರ ಅಂಗವಾಗಿ ರೈತರ ತೋಟ ಮತ್ತು ಹೊಲಗಳಿಗೆ ಕೃಷಿ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಬೆಳೆಗಳಲ್ಲಿ ಬರುವಂತಹ ಕೀಟ ಹಾಗೂ ರೋಗಗಳ ತೊಂದರೆ ಇರುವಂತಹ ತೋಟಗಳನ್ನು ಹೆಚ್ಚು ಸಂರಕ್ಷಿಸಲು ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕಿದೆ. ಮಣ್ಣಿನಲ್ಲಿ ಪೊಟ್ಯಾಶಿಯಂ ಅಂಶದ ಕೊರತೆಯನ್ನು ಪರೀಕ್ಷಿಸಿಕೊಳ್ಳಬೇಕು. ಮಣ್ಣಿಗೆ ಸೂಕ್ತ ಪೋಷಕಾಂಶಗಳನ್ನು ಸರಿಯಾದ ಸಮಯಕ್ಕೆ ಸರಿಯಾದ ಕ್ರಮದಲ್ಲಿ ನೀಡಬೇಕು. ಅಡಿಕೆಯಲ್ಲಿ ಬರುವಂತಹ ಕೆಂಪು ನುಸಿ, ರಸ ಹೀರುವ ತಿಗಣೆ, ಇವುಗಳ ಹಾನಿಯ ಪ್ರಮಾಣವನ್ನು ಗುರುತಿಸಲಾಯಿತು. ಮತ್ತು ಕೆಲವು ಮರಗಳು ಸುಳಿ ಕೊಳೆ ರೋಗದ ಬಾಧೆಗೆ ಒಳಗಾಗಿದ್ದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹುಲಿಕೆರೆ ಗ್ರಾಮದ ದೇವರಾಜ್, ರವಿ ಹಾಗೂ ವಿದ್ಯಾರ್ಥಿಗಳು ಇದ್ದರು.