ಸುದ್ದಿಕಡೂರು: ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಅಧಿದೇವತೆ ಶ್ರೀ
ಸ್ವರ್ಣಾಂಬ ದೇವಿಯ ಬ್ರಹ್ಮ ರಥೋತ್ಸವವು ಶುಕ್ರವಾರ ಸಾವಿರಾರು ಸದ್ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು
ಬೆಳಿಗ್ಗೆ ಸ್ವರ್ಣಾಂಬ ದೇವಿ ಮೂಲಸ್ಥಾನದಲ್ಲಿ ವಿಶೇಷ ಅಭಿಷೇಕ,ಪೂಜೆ ನೆರವೇರಿದ ನಂತರ ಗಜಾರೋಹಣೋತ್ಸವ ನಡೆಯಿತು. ನಂತರ ಕನ್ನಿಕಾ ಪೂಜೆ, ಪುರಸ್ಸರ ಕಲ್ಯಾಣೋತ್ಸವ ನಡೆಸಲಾಯಿತು. ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಹೊರತಂದು ನೆರೆದ ಭಕ್ತರ ಮುಂದೆ ಮೂರು ಸುತ್ತು ಪ್ರದಕ್ಷಿಣೆ ನಡೆಸಲಾಯಿತು
ಭಕ್ತರು ಅರಿಶಿನ ಕುಂಕುಮ ಸಮರ್ಪಿಸಿದ ನಂತರ ಸ್ವರ್ಣಾಂಬ ದೇವಿಯನ್ನು ಆಲಂಕೃತ ರಥದಲ್ಲಿ ಪ್ರತಿಷ್ಟಾಪಿಸಲಾಯಿತು. ಕದಳಿವೃಕ್ಷ ಛೇದನ ಮತ್ತು
ಬಲಿಪೂಜೆ ನಡೆದ ನಂತರ ನೆರೆದ ಭಕ್ತರು ಉತ್ಸಾಹದಿಂದ ರಥವನ್ನೆಳೆದು ಸಂಭ್ರಮಿಸಿದರು. ರಥದ ಕಳಶಕ್ಕೆ ಬಾಳೆಹಣ್ಣು ಎಸೆದು ಹರಕೆ ತೀರಿಸಿದರು. ಅರಳೀಮರದಮ್ಮ ಮತ್ತು ಚೌಡ್ಲಾಪುರ ಕರಿಯಮ್ಮ ಗ್ರಾಮ ದೇವರಗಳ
ಉಪಸ್ಥಿತಿಯಲ್ಲಿ ನಡೆದ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ಪುರೋಹಿತ ದೇವೀಪ್ರಸಾದ ಶರ್ಮ ಮತ್ತು ತಂಡದವರು ನೆರವೇರಿಸಿದರು.
ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಹೊರ ಜಿಲ್ಲೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ದೇವಸ್ಥಾನದ ವತಿಯಿಂದ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಮಂಡಳಿ ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ, ಕಾರ್ಯದರ್ಶಿ ಎಂ.ವೈ.ಚಂದ್ರಶೇಖರ,ಧರ್ಮದರ್ಶಿಗಳಾದ ಎಂ.ಆರ್.ಧರ್ಮಣ್ಣ, ಎಂ.ಎಚ್.ಪುಟ್ಟಸ್ವಾಮಿ,ಧರ್ಮದರ್ಶಿ ಮಂಡಳಿ ಸದಸ್ಯರು ಇದ್ದರು.