ಸುದ್ದಿ ಕಡೂರು : ಕಡೂರು ತಾಲ್ಲೂಕಿನ ಸಿಂಗಟಗೆರೆ ಶ್ರೀಕ್ಲಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ರಾಜಗೋಪುರ ನಿರ್ಮಾಣಕ್ಕೆ ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ವಿಜಯದಶಮಿಯಂದು ಶಂಕುಸ್ಥಾಪನೆ ನೆರವೇರಿಸಿದರು.
ಶ್ರೀಕಲ್ಲೇಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಕೆ.ನಾಗರಾಜ್ ಮಾತನಾಡಿ, ಅಂದಾಜು 10 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಲಿನ ರಾಜಗೋಪುರ ನಿರ್ಮಿಸಲು ತೀರ್ಮಾನಿಸಲಾಗಿದೆ. ರಾಜಗೋಪುರದ ತಳಪಾಯ 41*45 ಇರಲಿದೆ. ಆದರೆ ರಾಜಗೋಪುರದ ಆಯಾ 29*43 ಅಡಿ ಇರಲಿದೆ. ಅದಕ್ಕಾಗಿ 18 ಅಡಿ ಆಳದಿಂದ ಕಲ್ಲಿನ ತಳಪಾಯ ಹಾಕಲಾಗಿದೆ. ಐದು ಅಂತಸ್ತು ಹೊಂದಿರುವ 58.6 ಅಡಿ ಎತ್ತರದ ರಾಜಗೋಪುರ ನಿರ್ಮಾಣಕ್ಕೆ ಸುಮಾರು 3.5 ಟನ್ ತೂಕದ ಕಲ್ಲು ಬಳಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.ಕಾಮಗಾರಿ ಮುಗಿಯಲು ಅಂದಾಜು ಮೂರು ವರ್ಷವಾಗಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯದರ್ಶಿ ಎಸ್.ಕೆ.ರಮೇಶ್ ಮಾತನಾಡಿ ಹಳೆಯ ರಾಜಗೋಪುರ ಹೊಸ ದೇವಾಲಯಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಹಳೆಯ ರಾಜಗೋಪುರವನ್ನು ತೆರವುಗೊಳಿಸಲಾಗಿದ್ದು ಕಲ್ಲೇಶ್ವರ ಸ್ವಾಮಿಯ ಅಪ್ಪಣೆ ಮೇರೆಗೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ರಾಜಗೋಪುರ ನಿರ್ಮಿಸಲು ದೇವಾಲಯ ಅಭಿವೃದ್ದಿ ಸಮಿತಿ ಮುಂದಾಗಿದೆ.ಇಷ್ಟೊಂದು ದೊಡ್ಡ ಮೊತ್ತದ ಹಣ ಹೊಂದಿಸುವುದು ಸಮಿತಿಗೆ ಸವಾಲಾಗಿದೆ. ಭಕ್ತರ ಸಹಕಾರ ಅತ್ಯವಶ್ಯಕವಾಗಲಿದೆ ಎಂದರು.ಮುಖಂಡರಾದ ಬಿ.ಪಿ.ದೇವಾನಂದ್,ಬಿ.ಕಲ್ಲೇಶ್,ಹ್ಯಾರಳಘಟ್ಟ ಕುಮಾರಪ್ಪ,ಹೆಚ್.ಎಸ್.ಉದಯ ಕುಮಾರ್,ಕಲ್ಲೇಶಪ್ಪ ಮತ್ತಿತರರಿದ್ದರು.