ಸುದ್ದಿಕಡೂರು : ಮೂರು ಸಾವಿರಕ್ಕೂ ಅಧಿಕ ರಾಮಾಯಣ ಕಾವ್ಯ,ಗ್ರಂಥಗಳು ರಚನೆಯಾಗಿದ್ದರೂ ಮಹರ್ಷಿ ವಾಲ್ಮೀಕಿ ರಚಿತವಾದ ರಾಮಾಯಣವೇ ಶ್ರೇಷ್ಠವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರು ತಾಲೂಕು ಆಡಳಿತ,ಸಮಾಜ ಕಲ್ಯಾಣ ಇಲಾಖೆ,ಪುರಸಭೆ ವತಿಯಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶೋಷಿತ,ಹಿಂದುಳಿದ ಬೇಡ ಸಮಾಜದಲ್ಲಿ ಹುಟ್ಟಿದ ರತ್ನಾಕರ ವಾಲ್ಮೀಕಿಯಾಗಿ ಬದಲಾವಣೆಗೊಂಡು ಅಖಂಡ ಭಾರತಕ್ಕೆ ಶ್ರೀ ರಾಮಯಣ ಗ್ರಂಥವನ್ನು ನೀಡಿದ ಮಹಾನ್ ದಾರ್ಶನಿಕ,ಸಂಸ್ಕೃತ ಕವಿ ಹಾಗೂ ಋಷಿಮುನಿಯಾಗಿ ರಾಮಾಯಣದ ಮೂಲಕ ಜನಮನದಲ್ಲಿ ನೆಲೆಸಿದ್ದಾರೆ ಎಂದರು.
ತಾವು ಹುಟ್ಟಿದ ಜಾತಿ,ಧರ್ಮಗಳಿಂದ ವಿದ್ಯೆ,ಬುದ್ಧಿ ಬರುವುದಿಲ್ಲ ಇದಕ್ಕೆ ಮಹರ್ಷಿ ವಾಲ್ಮೀಕಿಯೇ ಜ್ವಲಂತ ಸಾಕ್ಷಿಯಾಗಿದ್ದಾರೆ.ಜಾತಿ ಕಟ್ಟಳೆಗಳಿಂದ ಹೊರ ಬಂದು ಆದರ್ಶ ಪುರುಷರ ದಾರ್ಶನಿಕರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಆಗ ಮಾತ್ರ ಜಯಂತಿ ಗಳಿಗೆ ಮಹತ್ವ ಬರುತ್ತದೆ ಎಂಬ ಅಂಶವನ್ನು ಪ್ರತಿಯೊಂದು ಜಾತಿ-ವರ್ಗದವರು ಕಂಡುಕೊಳ್ಳಬೇಕಾಗಿದೆ ಎಂದರು.
ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ರಮೇಶ್ ಮತ್ತು ನಿಕಟಪೂರ್ವ ಅಧ್ಯಕ್ಷ ನಂದೀಶ್ ಮದಕರಿ ಅವರು ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಾಸಕರಿಗೆ ನಿವೇಶನಕ್ಕೆ ಬೇಡಿಕೆ ಇಟ್ಟರು. ತಾಲೂಕು ವಾಲ್ಮೀಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬಾಣಾವರದ ಸರ್ಕರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ದೊರೇಶ್ ಉಪನ್ಯಾಸ ನೀಡಿದರು. ತಹಸೀಲ್ದಾರ್ ಎಂ.ಪಿ.ಕವಿರಾಜ್ ಸಮಾಜದ ಮುಖಂಡರಾದ ಪುರಸಭೆ ಸದಸ್ಯೆ ಹಾಲಮ್ಮ ಸಿದ್ರಾಮಪ್ಪ,ಮಂಜುಳಮ್ಮ,ಕೆ.ಕೆ.ಮಂಜು,ಜೆ.ಪಿ.ನಾಯಕ್,ಸುರೇಶ್ ತಾಲೂಕು ಸಮಾಜ ಕಲ್ಯಾಣಾಧಿಕಾರಿ ರೇವಣ್ಣ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.