ಸುದ್ದಿ ಕಡೂರು : ತಾಲ್ಲೂಕಿನ ಅಂತರಘಟ್ಟೆ ಸಮೀಪ ಗುಮ್ಮನಹಳ್ಳಿಭೋವಿಕಾಲೊನಿಯಲ್ಲಿ ಆಕಸ್ಮಿಕವಾಗಿ ಬೆಂಕಿತಗುಲಿ ಎರಡು ಗುಡಿಸಲು ಮನೆಗಳು ಬುಧವಾರ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ 6 ವರ್ಷದ ಮಗುವೊಂದು ಬೆಂಕಿಯಿಂದ ಪಾರಾಗಿದೆ.ಗುಮ್ಮನಹಳ್ಳಿ ಭೋವಿಕಾಲೊನಿಯ ಶಶಿ ಮತ್ತು ಗೀತಾ ಕಲ್ಲೇಶ್ ಎಂಬುವವರ ಮನೆಗಳು ಸಂಪೂರ್ಣ ಸುಟ್ಟುಹೋಗಿದೆ. ಪಕ್ಕದ ಹನುಮಂತು ಎಂಬುವರ ಮನೆಯು ಅದೃಷ್ಟವಶಾತ್ ಬೆಂಕಿಯ ಅವಘಡದಿಂದ ಬಚಾವ್ ಆಗಿದೆ.ಗ್ರಾಮದಲ್ಲಿ ಸಾವು ಸಂಭವಿಸಿದ್ದರಿಂದ ಅಂತ್ಯಸಂಸ್ಕಾರಕ್ಕೆ ಇಡೀ ಗ್ರಾಮಸ್ಥರು ತೆರಳಿದ್ದರು, ಆಕಸ್ಮಿಕ ಬೆಂಕಿಯು ಗುಡಿಸಲು ಮನೆಗಳಿಗೆ ಹೊತ್ತಿಕೊಂಡು ಉರಿಯುತ್ತಿದ್ದನ್ನು ಕಂಡ ಗ್ರಾಮಸ್ಥರು ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸಪಟ್ಟರು ಎರಡು ಮನೆಗಳು ಬೆಂಕಿಗಾಹುತಿಯಾಗಿದೆ. ಶಶಿ ಎಂಬುವವರ ಮನೆಯಲ್ಲಿ ಮಲಗಿದ್ದ 6ವರ್ಷದ ಮಗುವೊಂದನ್ನು ನೆರೆಹೊರೆಯ ಮಹಿಳೆಯರು ಗುಡಿಸಲಿನಿಂದ ಕರೆತಂದು ಕಾಪಾಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಂತರಘಟ್ಟೆ ಉಪಠಾಣೆಯ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.