ಸುದ್ದಿ ಚಿಕ್ಕಮಗಳೂರು : ಕಳೆದೊಂದು ವಾರದಿಂದ ಶ್ರೀರಾಮಸೇನಾ ವತಿಯಿಂದ ನಡೆಯುತ್ತಿದ್ದ ದತ್ತಮಾಲಾ ಅಭಿಯಾನಕ್ಕೆ ಭಾನುವಾರ ಶಾಂತಿಯುತವಾಗಿ ಸಂಪನ್ನಗೊಂಡಿತು. ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ ಸಾವಿರಾರು ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆದು ಪುನೀತರಾದರು. ಇದೇ ವೇಳೆ ದೇವಾಲಯದ ಹೊರಭಾಗದಲ್ಲಿ ಹೋಮ-ಹವನ ನಡೆಸಿ, ದತ್ತಪೀಠ ಹಿಂದೂಗಳದ್ದೆ ಎಂದು ಆಗ್ರಹಿಸಿದ ದತ್ತಭಕ್ತರು, ಸರ್ಕಾರ ಕೂಡಲೇ ದತ್ತಪೀಠವನ್ನ ಹಿಂದೂಗಳ ಪೀಠವೆಂದು ಘೋಷಿಸಬೇಕೆಂದು ಆಗ್ರಹವ್ಯಕ್ತಪಡಿಸಿದರು.
ಮೊಳಗಿದ ಜೈ ಶ್ರೀರಾಮ್ ಘೋಷಣೆ :
ಜೈ ಶ್ರೀರಾಮ್ ಅನ್ನೋ ಘೋಷಣೆ. ದತ್ತಪೀಠ ನಮ್ಮದೆಂಬ ಘೋಷಣೆ. ಪೋಲಿಸರ ಸರ್ಪಗಾವಲು. ಇದೆಲ್ಲಾ ಕಂಡು ಬಂದದ್ದು ಕಳೆದೊಂದು ವಾರದಿಂದ ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನದ ಮುಕ್ತಾಯದ ದಿನವಾವಾದ ಇಂದು. ಸರ್ಕಾರ ಮುಸ್ಲಿಮರ ಓಲೈಕೆ ಮುಂದಾಗಿದೆ ದಾಖಲಾತಿಗಳನ್ನ ಕೂಲಂಕುಶವಾಗಿ ಪರಿಶೀಲಿಸಿ ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಬೇಕೆಂದು ಆಗ್ರಹ ಎಂದಿನಂತೆ ಜೋರಾಗಿತ್ತು. ದತ್ತಪೀಠ ಸಂಪೂರ್ಣ ಹಿಂದುಗಳ ಪೀಠವಾಗಬೇಕು. ಸರ್ಕಾರ ಒಂದು ವೇಳೆ ದತ್ತಪೀಠ ಎಂಬ ನಾಮಫಲಕವನ್ನ ಬದಲಿಸಿದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ದತ್ತಭಕ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಿ. ಹಿಂದೂಗಳ ಪೂಜೆಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.