ಸುದ್ದಿ ಕಡೂರು : ತಾಲ್ಲೂಕಿನಾದ್ಯಂತ ಸೋಮವಾರ ಸಂಜೆ ಗುಡುಗು- ಸಿಡಿಲಿನೊಂದಿಗೆ ಧಾರಾಕಾರವಾಗಿ ಮಳೆ ಸರಿಯಿತು.ಸಂಜೆ 6-30 ಕ್ಕೆ ಜಿಟಿಜಿಟಿಯೊಂದಿಗೆ ಆರಂಭವಾದ ಮಳೆ ಬಳಿಕ ಜೋರಾಗಿ ಎರಡು ಗಂಟೆಗಳ ಕಾಲ ನಿರಂತರವಾಗಿ ಸುರಿಯಿತು. ರಸ್ತೆಗಳೆಲ್ಲ ಜಲಾವೃತವಾಗಿ ರಸ್ತೆ ಕಾಣದಂತಾಗಿ ವಾಹನ ಸವಾರರು ಪರದಾಡಿದರು. ಗ್ರಾಮೀಣ ಭಾಗದಲ್ಲಿ ಜೋರು ಮಳೆಗೆ ಚರಂಡಿಗಳೆಲ್ಲ ಜಲಾವೃತಗೊಂಡು ಕೆಲವೆಡೆ ತಗ್ಗು ಪ್ರದೇಶದ ಮನೆಯೊಳಗೆ ನೀರು ನುಗ್ಗಿ ಜನರು ಪರದಾಡಿದರು. ಯಾವುದೇ ಅನಾಹುತವಾಗಿಲ್ಲ. ಬರದ ಬೇಗೆಗೆ ಸಿಲುಕಿ ರೈತರು ಬಿತ್ತಿದ್ದ ಬೇಸಿಗೆ ಜೋಳಕ್ಕೆ ಈ ಮಳೆ ತಂಪು ನೀಡಿದೆ.ಆದರೆ ಕೆಲವೆಡೆ ಹೂವುಕಟ್ಟುವ ಹಂತದಲ್ಲಿದ್ದ ಹುರುಳಿ ಬೆಳೆಯಲ್ಲಿ ನೀರು ನಿಂತಿರುವುದು ಬೆಳೆ ಕೊಳೆಯುವ ಸಂಭವವಿದೆ. ಒಣಗುವ ಹಂತದಲ್ಲಿದ್ದ ಅಡಿಕೆ, ತೆಂಗು ತೋಟಗಳಿಗೆ ಜೀವದಾನ ದೊರೆತಿದೆ. ಮುಂಗಾರು ಬಳಿಕ ಇಲ್ಲಿಯವರೆಗೂ ಹದವಾದ ಮಳೆಯನ್ನೇ ಕಾಣದಿದ್ದ ತಾಲ್ಲೂಕಿನ ರೈತಾಪಿ ವರ್ಗಕ್ಕೆ ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಹರ್ಷಗೊಂಡಿದ್ದಾರೆ.