ಸುದ್ದಿ ಚಿಕ್ಕಮಗಳೂರು : ಮಾಜಿ ಸಚಿವ ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ. ಚಂದ್ರೇಗೌಡರ ನಿಧನದಿಂದ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅತೀವ ಸಂತಾಪ ವ್ಯಕ್ತಪಡಿಸಿದರು.
ವಯೋ ಸಹಜ ಖಾಯಿಲೆಯಿಂದ ನಿಧನರಾದ ದಿವಗಂತ ಡಿ.ಬಿ. ಚಂದ್ರೇಗೌಡರ ದಾರದಹಳ್ಳಿಯ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಪುಷ್ಪ ಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದರು.
ಡಿ.ಬಿ. ಚಂದ್ರೇಗೌಡರು ಈ ನಾಡು, ಈ ದೇಶ ಕಂಡ ಅಪರೂಪದ ಅತ್ಯುತ್ತಮ ರಾಜಕಾರಣಿ. ನುರಿತ ಸಂಸದೀಯ ಪಟುವಾಗಿದ್ದರು. ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ಈ ನಾಲ್ಕೂ ವೇದಿಕೆಗಳಲ್ಲೂ ಅವರು ಸದಸ್ಯರಾಗಿದ್ದರು ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸುವುದು ಕಷ್ಟಕರವಾಗಿದ್ದ ಸಂದರ್ಭದಲ್ಲೂ ಅವರು ಅತ್ಯಂತ ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸಿದ್ದರು ಎಂದರು.
ಈ ವೇಳೆ ಡಿ.ಬಿ. ಚಂದ್ರೇಗೌಡರ ರಾಜಕೀಯ ಹಾದಿಯನ್ನು ಹಾಗೂ ಚಂದ್ರೇಗೌಡರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುವುದಾಗಿ ತಿಳಿಸಿದರು.