ಸುದ್ದಿ ಕಡೂರು: ಕನ್ನಡ ನಾಡು ನುಡಿಯ ಅಸ್ಮಿತೆಯನ್ನು ಉಳಿಸಿಕೊಂಡು ಬೆಳೆಸಬೇಕಾದ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಕೆ.ಎಂ.ರಸ್ತೆಯ ಗಣಪತಿ ಪೆಂಡಾಲ್ ಸಮೀಪದ ಬಳಿ ಕನ್ನಡ ಭುವನೇಶ್ವರಿ ಪುತ್ತಳಿ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ನಾಡು ನುಡಿಯ ಬಗ್ಗೆ ಪರಿಷತ್ತು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು, ಕಡೂರು ಪಟ್ಟಣದಲ್ಲಿ ಭುವನೇಶ್ವರಿಯ ಪ್ರತಿಮೆ ಸ್ಥಾಪನೆಗೊಳ್ಳುತ್ತಿರುವುದು ನಮ್ಮ ತಾಯಿ ಭಾಷೆಯ ಮೇಲಿನ ಅಭಿಮಾನ ಸದಾ ಜಾಗೃತವಾಗಿರಲು ಪೂರಕವಾಗಿದೆ. ಎಲ್ಲಾ ಜನಪ್ರತಿನಿಧಿಗಳು ಈ ಮಹತ್ಕಾರ್ಯಕ್ಕೆ ಕೈ ಜೋಡಿಸಲಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿಯೇ ಪ್ರಥಮವಾಗಿ ಪರಿಷತ್ತಿನ ಮೂಲಕ ಕನ್ನಡತಾಯಿಯ ಪುತ್ಥಳಿ ಸ್ಥಾಪಿಸುತ್ತಿರುವುದು ಸಂತಸ ತಂದಿದೆ. ನಾಡು ನುಡಿಯ ಸೇವೆಯಲ್ಲಿ ಪರಿಷತ್ತಿನ ಮೂಲಕ ನಿರಂತರವಾಗಿ ತೊಡಗಿಸಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮರಗುದ್ದಿ ಮನು, ಶ್ರೀಕಾಂತ್ , ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಸತ್ಯನಾರಾಯಣ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್, ಸಂಚಾಲಕಿ ಪದ್ಮಾವತಿ ಸೂರಿ ಶ್ರೀನಿವಾಸ್, ಕಸಾಪ ತಾಲ್ಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ಧಪ್ಪ, ಗೌರವ ಕಾರ್ಯದರ್ಶಿ ಕುಪ್ಪಾಳು ಶಾಂತಮೂರ್ತಿ, ಬಿ.ಚಂದ್ರಶೇಖರ್, ಗೌರವಾಧ್ಯಕ್ಷ ಆರ್.ಜಿ.ಕೃಷ್ಣಸ್ವಾಮಿ, ಬುಕ್ಕಸಾಗರ ರಾಜಶೇಖರ್, ಇದ್ದರು.