ಸುದ್ದಿ ಕಡೂರು : ಕಡವೆ ಮಾಂಸದೂಟ ಸವಿದ ಸರಸ್ವತಿಪುರ ಗ್ರಾಮದ ಇಬ್ಬರನ್ನು ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಸರಸ್ವತಿಪುರ ಗ್ರಾಮದ ಸಂತೋಷ್ ಮತ್ತು ಪೃಥ್ವಿ ಬಂಧಿತ ಆರೋಪಿಗಳು. ಗ್ರಾಮದ ಮನೆಯೊಂದರಲ್ಲಿ ಐದಾರೂ ಜನರು ಕಡವೆಯ ಮಾಂಸದೂಟವನ್ನು ತಯಾರಿಸಿ ಸವಿದಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಉಳಿದವರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ಸುಮಾರು 1.5ಕೆಜಿಯಷ್ಟು ಕಡವೆ ಮಾಂಸ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ದೊರಕಿದೆ. ಬಂದಿತ ಆರೋಪಿಗಳಿಂದ ಕಡವೆ ಮಾಂಸ ಇವರಿಗೆ ಸಿಕ್ಕಿದ್ದು ಹೇಗೆ, ಬೇರೆ ಕಡೆಯಿಂದ ಮಾಂಸ ತಂದಿದ್ದಾರೋ ಅಥವಾ ಬೇಟೆಯಾಡಿದ್ದಾರೋ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮೇಘನ, ಅರಣ್ಯ ರಕ್ಷಕರಾದ ಎಸ್.ಸಿ.ಸುನಿಲ್, ಶಿವಕುಮಾರ್,ರವಿಕುಮಾರ್ ಇದ್ದರು.