ಸುದ್ದಿ ಕಡೂರು : ಪಟ್ಟಣದ ಕೋರ್ಟ್ ಗಣಪತಿ ದೇವಾಲಯದಲ್ಲಿ ಗೋಪುರದ ಕಳಸ ಪ್ರತಿಷ್ಠಾಪನೆಯ ಮಹೋತ್ಸವದ ಮಂಡಲ ಪೂಜಾ ಕಾರ್ಯಕ್ರಮಗಳು ಗುರುವಾರ ಜರುಗಿದವು.
ತೀರ್ಥಹಳ್ಳಿಯ ಆಗಮಿಕರಾದ ಲಕ್ಷ್ಮೀಶ ತಂತ್ರಿ ಸಂಗಡಿಗರಿಂದ ಪ್ರಧಾನ ಕಳಸಸ್ಥಾಪನೆ, ಕಲಾತತ್ವ ಹೋಮ, ಆದಿವಾಸ ಹೋಮ, ಪೂರ್ಣಹುತಿ, ಕುಂಭಾಭಿಷೇಕ ಹಾಗೂ ಮಹಾಪೂಜಾ ಕೈಕಂರ್ಯಗಳು ನೆರವೇರಿದವು.
ಶ್ರೀ ಸ್ವಾಮಿಗೆ ದೇವಾಲಯದ ಪ್ರಧಾನ ಅರ್ಚಕರಾದ ರಾಮಚಂದ್ರಭಟ್ ನೇತೃತ್ವದಲ್ಲಿ ವಿಶೇಷ ಹೂವಿನ ಅಲಂಕಾರ ಸಮರ್ಪಿಸಲಾಯಿತು. ಬಳಿಕ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ದೇವಾಲಯ ಸಮಿತಿ ಹಾಗೂ ವಕೀಲರ ಸಂಘದ ಅಧ್ಯಕ್ಷ ವಕೀಲ ತಿಪ್ಪೇಶ್ ಮಾತನಾಡಿ, ದೇವಾಲಯದಲ್ಲಿ ಶ್ರೀ ಸ್ವಾಮಿಯ ವಿಗ್ರಹಕ್ಕೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಭಕ್ತರ ಅನನ್ಯ ಸಹಕಾರದಿಂದ ಗೋಪುರದ ಕಳಸಾರೋಹಣದ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಹಿನ್ನಲೆಯಲ್ಲಿ ಧಾರ್ಮಿಕವಾದ ಮಂಡಲ ಪೂಜಾ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ರಾಜೇಶ್, ಶಿವಶಂಕರಪ್ಪ, ಮನೋಹರ್, ಬಿ.ಶಿವಕುಮಾರ್, ಕೆ.ಟಿ. ನೀಲಕಂಠಪ್ಪ, ಎಂ.ಎಸ್.ಹೆಳವಾರ್, ಸಿ.ಎಲ್. ದೇವರಾಜ್, ಕೆ.ಎಂ. ಜಯಣ್ಣ ಹಾಗೂ ದೇವಾಲಯ ಸಮಿತಿಯ ಸದಸ್ಯರಾದ ಎಸ್. ಸೋಮಶೇಖರ್, ಟಿ.ಕೆ. ಮಂಜುನಾಥ್, ಕೊಂಡಯ್ಯ, ಸಂಪತ್ಕುಮಾರ್, ಕೆ.ಜಿ. ಮಂಜುನಾಥ್, ಪ್ರಸನ್ನ, ಚಂದ್ರು, ಭದ್ರಿಸ್ವಾಮಿ, ಕೆ.ಜಿ. ಶ್ರೀನಿವಾಸ್ ಕವಿತಾ, ಕವನಾ, ವಿಜಯಲಕ್ಷ್ಮೀ, ಸಂಗೀತಾ ಮತ್ತಿತರಿದ್ದರು.