ಸುದ್ದಿ ಕಡೂರು: ಪ್ರಸ್ತುತ ದಿನಮಾನಗಳಲ್ಲಿ ನಡೆಯುತ್ತಿರುವ ಅಪಸವ್ಯಗಳು ನಾಗರೀಕ ಸಮಾಜದಲ್ಲಿ ಆತಂಕ ಮತ್ತು ನೋವು ತಂದಿವೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಮಠದ ಡಾ. ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಜಾತಿಗಿಂತ ಧರ್ಮ ದೊಡ್ಡದು. ಅದನ್ನುಳಿಸಿದರೆ ವಿಶ್ವ ಉಳಿಯುತ್ತದೆ . ಪ್ರಸ್ತುತ ಅಧುನಿಕತೆಯ ಆಕರ್ಷಣೆಯಲ್ಲಿ ದೇವರು,ಧರ್ಮ, ಗುರುಪೀಠಗಳನ್ನು ಮರೆತು ಸನಾತನ ಧರ್ಮವನ್ನು ಮರೆತಿರುವುದನ್ನು ನೋಡುತ್ತಿದ್ದೇವೆ. ಗಾಳಿ,ನೀರು,ಭೂಮಿ, ಆಕಾಶ ಎಲ್ಲದಕ್ಕೂ ಒಂದು ಧರ್ಮವಿದೆ. ಅದನ್ನು ಮೀರಿ ನಡೆದರೆ ಜೀವಸಂಕುಲ ಆಪತ್ತಿಗೀಡಾಗುತ್ತದೆ. ಮಾನವೀಯತೆಯ ದೃಷ್ಟಿಯನ್ನು ದೂರವಿಟ್ಟು ದೇವರು,ಧರ್ಮ,ಭಾಷೆ,ಜಾತಿಯ ಹೆಸರಲ್ಲಿ ಸಂಘರ್ಷ ಮಾಡುವ ಪರಿಪಾಠ ದೂರವಾಗಬೇಕು. ಹಲವಾರು ಹೆಸರುಗಳಿದ್ದರೂ ದೇವರು ಒಂದೇ. ಸರ್ವ ಧರ್ಮ ಸಮನ್ವಯ ಇಂದಿನ ಅನಿವಾರ್ಯ ಅಗತ್ಯ ಎಂದರು.
ಬೀರೂರು ರಂಭಾಪುರಿ ಶಾಖಾ ಮಠದ ಶ್ರೀ
ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ದೇವಸ್ಥಾನದ ಧರ್ಮದರ್ಶಿ ಮಂಡಳಿ ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ, ಕಾರ್ಯದರ್ಶಿ ಎಂ.ವೈ.ಚಂದ್ರಶೇಖರ, ಎಂ.ಆರ್.ಧರ್ಮಣ್ಣ, ಮಾಲತೇಶ್, ಚೇತನ್ ಕುಮಾರ್, ಪುಟ್ಟಸ್ವಾಮಿ, ಧರ್ಮದರ್ಶಿ ಮಂಡಳಿ ಸದಸ್ಯರು ಇದ್ದರು.