ಸುದ್ದಿ ಕಡೂರು : ದೈಹಿಕ ಮತ್ತು ಮಾನಸಿಕವಾಗಿ ಸಧೃಡಗೊಳ್ಳಲು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಲಿದೆ
ಎಂದು ಬಿಜೆಪಿ ಮುಖಂಡ ದಾನಿ ಉಮೇಶ್ ಹೇಳಿದರು.
ತಾಲ್ಲೂಕಿನ ಹೋಚೀಹಳ್ಳಿ ಬೀರಲಿಂಗೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಹೋಚಿಹಳ್ಳಿ ಪ್ರೀಮಿಯರ್ ಲೀಗ್ -01 ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಡೂರು ತಾಲ್ಲೂಕು ಕ್ರೀಡಾಲೋಕಕ್ಕೆ ಹಲವಾರು ಪ್ರತಿಭೆಗಳನ್ನು ನೀಡಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಆಧಾರಸ್ತಂಭವಾದ ವೇದಾ ಕೃಷ್ಣಮೂರ್ತಿ ನಮ್ಮ ಕಡೂರಿನವರು ಎಂಬುದು ಹೆಮ್ಮೆಯ ಸಂಗತಿ.
ಕ್ರೀಡೆಗಳು ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಗ್ರಾಮೀಣ ಭಾಗದಲ್ಲಿ ಇಂತಹ ಪಂದ್ಯಾವಳಿಗಳು ಹೆಚ್ಚು ನಡೆಯಬೇಕು. ಅದರಿಂದ ಪರಸ್ಪರ ಬಾಂಧವ್ಯ ಹೆಚ್ಚುತ್ತದೆ. ಕ್ರಿಕೆಟ್ ಮಾತ್ರವಲ್ಲದೇ ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಇತರೆ ಗ್ರಾಮೀಣ ಕ್ರೀಡೆಗಳಿಗೂ ಪ್ರೋತ್ಸಾಹ ದೊರೆಯಬೇಕು. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಹೆಸರೂ ಸಹ ನಮ್ಮ ಕರ್ನಾಟಕದ ಇತಿಹಾಸವನ್ನು ನೆನಪಿಸುವಂತಿದೆ.ಈ ನಿಟ್ಟಿನಲ್ಲಿ ಹೋಚೀಹಳ್ಳಿಯ ಯುವಕರ ಕಾರ್ಯ ಶ್ಲಾಘನೀಯ. ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಹೋಚೀಹಳ್ಳಿ ಗ್ರಾಮಸ್ಥರು ಅಭಿನಂದನೀಯರು ಎಂದರು.
ಈ ಸಂದರ್ಭದಲ್ಲಿ
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಹೋಚಿಹಳ್ಳಿ ಭೋಗಪ್ಪ ಮಾತನಾಡಿ, ಗ್ರಾಮದ ಯುವಕರ ಸಂಘಟನೆಯೊಂದಿಗೆ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಶರಾವತಿ ಲಿಂಗರಾಜು, ರೇಣುಕಪ್ಪ, ಮಲ್ಲೇಶಪ್ಪ, ನಂಜುಂಡಪ್ಪ, ಲೋಕೇಶ್, ಶಾರದಮ್ಮ, ಮಂಜುನಾಥ ಇದ್ದರು.