ಸುದ್ದಿ ಕಡೂರು : ತಾಲ್ಲೂಕಿನ ಚಿಕ್ಕಿಂಗಳ ಗ್ರಾಮದ
ಕೆರೆಯ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕರನ್ನು ಕಾಪಾಡಲು ಹೋದ ವೃದ್ದ ಸೇರಿದಂತೆ ಬಾಲಕನೋರ್ವ ಮಂಗಳವಾರ ಕೆರೆಯ ನೀರಿನಲ್ಲಿ ಅಸುನೀಗಿದ್ದಾರೆ.
ಚಿಕ್ಕಿಂಗಳ ಗ್ರಾಮದ ಕೃಷ್ಣನಾಯ್ಕ್(65) ಮತ್ತು ಆದರ್ಶ (14) ಕೆರೆಯಲ್ಲಿ ಮೃತಪಟ್ಟ ದುರ್ದೈವಿಗಳು.
ಮೃತ ಕೃಷ್ಣನಾಯ್ಕ್ ಚಿಕ್ಕಿಂಗಳ ಗ್ರಾಮದ ಬಳಿಯ ಕೆರೆಯ ನೀರನ್ನು ಕುರಿಗಳಿಗೆ ಕುಡಿಸಲು ಹೋದಾಗ ಕೆರೆಯಲ್ಲಿರುವ ಗುಂಡಿಯಲ್ಲಿ ಗ್ರಾಮದ ಇಬ್ಬರು ಬಾಲಕರು ಈಜಾಡುತ್ತಾ ನೀರಿನಲ್ಲಿ ಮುಳುಗಿ ಸಿಲುಕಿಕೊಂಡಿದ್ದರು. ಇದನ್ನು ಕಂಡ ಕೃಷ್ಣನಾಯ್ಕ್ ಈಜಾಡಲು ಇಳಿದಿದ್ದ ಬಾಲಕರ ಪೈಕಿ ಒಬ್ಬನನ್ನು ನೀರಿನಿಂದ ಹೊರ ತಂದು ಬಿಟ್ಟು ಬಳಿಕ ಮತ್ತೋರ್ವ ನೀರಿನ ಗುಂಡಿಯಲ್ಲಿ ಸಿಲುಕಿಕೊಂಡಿದ್ದ ಆದರ್ಶ ಎಂಬಾತನನ್ನು ಹೊರತರುವ ಸಂದರ್ಭದಲ್ಲಿ ಗುಂಡಿಯಲ್ಲಿ ಇಬ್ಬರು ಸಿಲುಕಿ ನೀರಿನಲ್ಲೇ ಮೃತಪಟ್ಟಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.